ಉಡುಪಿ: ಭಾರೀ ಮಳೆಯಿಂದಾಗಿ ಗುಡ್ಡ ಕುಸಿಯುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಮನೆ, ಶಾಲೆ ಸೇರಿದಂತೆ ಕಟ್ಟಡಗಳು ನೆಲಸಮವಾಗುತ್ತಿದ್ದು, ಸಾರ್ವಜನಿರಿಕರು ಭಯದ ವಾತಾವರಣದಲ್ಲೇ ಬದುಕುವಂತಾಗಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೆರ್ಗಾಲು ನಂದನವನ ಶಾಲೆ ಕುಸಿದುಬಿದ್ದಿದೆ. ಕಳೆದ ಕೆಲವು ದಿನಗಳಿಂದ ವ್ಯಾಪಕ ಮಳೆಯಾದ ಪರಿಣಾಮ ಈ ಶಾಲೆ ಕಟ್ಟಡ ನೆಲಕ್ಕೆ ಉರುಳಿದೆ. ಶನಿವಾರ ತಡರಾತ್ರಿ ಈ ಅವಘಡ ಸಂಭವಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
ಶನಿವಾರ ಮಧ್ಯಾಹ್ನದ ವೇಳೆಗೆ ಶಾಲೆಯ ಗೋಡೆಗಳು ಉದುರಲು ಪ್ರಾರಂಭವಾಗಿತ್ತು. ರಾತ್ರಿ 10 ಗಂಟೆ ಸುಮಾರಿಗೆ ಭಾರಿ ಶಬ್ದದೊಂದಿಗೆ ಕಟ್ಟಡ ಬಹುತೇಕ ನೆಲಕಚ್ಚಿದೆ. ರಾತ್ರಿ ಈ ದುರ್ಘಟನೆ ಸಂಭವಿಸಿದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.
ಕಟ್ಟಡ ಪೂರ್ತಿ ನೆಲಸಮವಾಗಿದ್ದು ಶಾಲೆಯ ಮಧ್ಯವಿರುವ ಕೊಠಡಿ ಸಂಪೂರ್ಣ ನೆಲಸಮಗೊಂಡಿದೆ. ಈ ಶಾಲೆಯಲ್ಲಿ ಎಲ್ಕೆಜಿ, ಯುಕೆಜಿ ಸಹಿತ 25 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಪಕ್ಕದ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾದ ಹಿನ್ನಲೆಯಲ್ಲಿ ಕಟ್ಟಡ ತೇವವಾಗಿದೆ. ಹೀಗಾಗಿ ಕುಸಿದು ಬಿದ್ದಿದೆ. 100 ವರ್ಷ ಇತಿಹಾಸ ಇರುವ ಶಾಲೆ ಇದಾಗಿದ್ದು, ಕಟ್ಟಡ ಸುಮಾರು 45 ವರ್ಷ ಹಳೆಯದಾಗಿದೆ. ಸ್ಥಳಕ್ಕೆ ಶಾಸಕರು, ವಿವಿಧ ಅಧಿಕಾರಿಗಳು, ಪಂಚಾಯತ್ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.