ಗುಜರಾತ್ ಭವಿಷ್ಯ 20 ಗಂಟೆ ಮೊದಲೇ ಬರೆದಿದ್ದ ಉಡುಪಿ ಜ್ಯೋತಿಷಿ

Public TV
3 Min Read

– ರಾಹುಲ್ ಗಾಂಧಿ ರಾಜಕೀಯಕ್ಕೆ ಸೂಟ್ ಆಗಲ್ವಂತೆ

ಉಡುಪಿ: ಡಿಸೆಂಬರ್ 18 ಎಂಬ ಸಂಖ್ಯೆಯೇ ಯುದ್ಧಭೂಮಿ. ಬೆಳಗ್ಗೆ 9 ಗಂಟೆಗೆ ಸೂರ್ಯನಿಗೂ, ಶನಿಗೂ ಯುದ್ಧ. ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಕುಸಿತ. ಬಿಜೆಪಿಗರಿಗೆ ಜೋರು ಎದೆಬಡಿತ. ಹಿಗ್ಗಿದ ಕಾಂಗ್ರೆಸಿಗರು ನಂತರ ಕುಗ್ಗುತ್ತಾರೆ. ಆದರೆ ಮೋದಿ, ಅಮಿತ್ ಷಾ ಕ್ಲೀನ್ ಸ್ವೀಪ್ ಕನಸು ನನಸಾಗುತ್ತದೆ. ಇದು ಉಡುಪಿಯ ಕಾಪುವಿನ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಅವರ ಲೆಕ್ಕಾಚಾರ. ಈ ಲೆಕ್ಕಾಚಾರ ಮಾಡಿದ್ದು ಚುನಾವಣೆಯ ಫಲಿತಾಂಶ ಬರುವ 20 ಗಂಟೆ ಮೊದಲು ಅನ್ನೋದೇ ವಿಶೇಷ.

ಡಿಸೆಂಬರ್ 18 ಇಡೀ ದೇಶದ, ವಿಶ್ವದ ಚಿತ್ತ ಭಾರತದ ಎರಡು ರಾಜ್ಯಗಳ ಮೇಲಿತ್ತು. ಕಾರಣ ಪ್ರಧಾನಿ ಮೋದಿಯ ಪ್ರತಿಷ್ಠೆಯ ಫಲಿತಾಂಶಕ್ಕಾಗಿ ಜನ ಕಾಯುತ್ತಿದ್ದರು. ಬೆಳಗ್ಗೆ ಮೊದಲ ಸುತ್ತಿನಲ್ಲಿ ಬಿಜೆಪಿ ಮೇಲುಗೈ ಸಾಧಿಸಿದರೆ, 10 ಗಂಟೆ ಸುಮಾರಿಗೆ ಮುನ್ನಡೆ, ಹಿನ್ನಡೆ ಹಾವು-ಏಣಿ ಆಟ ಶುರುವಾಯಿತು. ಆ ಹೊತ್ತಿಗೆ ಷೇರು ಪೇಟೆ ಕುಸಿತ ಕಂಡಿತು. ಜನರ ಹೃದಯ ಬಡಿತ ಹೆಚ್ಚಾಯಿತು. ಕಾಂಗ್ರೆಸ್ ಹಿಗ್ಗಿ ಕುಣಿಯಿತು. ಆದರೆ ಲೆಕ್ಕಾಚಾರದ ಅಂತ್ಯಕ್ಕೆ ಮತ್ತೆ ಮೋದಿ ಮೋಡಿ ಮಾಡಿದರು. ಇಷ್ಟಕ್ಕೆಲ್ಲಾ ಕಾರಣ ಏನು ಗೊತ್ತಾ? ನಭೋ ಮಂಡಲದಲ್ಲಿ ರವಿ ಮತ್ತು ಶನಿಗ್ರಹದ ಯುದ್ಧವಂತೆ.

ಉಡುಪಿಯ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಡಿಸೆಂಬರ್ 18ಕ್ಕೆ ಹೀಗೆಯೇ ಆಗುತ್ತೆ ಎಂದು ಬರೆದುಕೊಟ್ಟಿದ್ದರು. ಅದು ನಿಜವಾಗಿದೆ. ಮೋದಿಯ ಮುಂದಿನ ಭವಿಷ್ಯವನ್ನೂ ಅಮ್ಮಣ್ಣಾಯರು ಜಾತಕ ಮೂಲಕ ತಿಳಿದಿದ್ದಾರೆ. ಫಲಿತಾಂಶ ಬರೋ ಮೊದಲೇ ಪ್ರಕಾಶ್ ಅಮ್ಮಣ್ಣಾಯ ಚುನಾವಣೆಯ ದಿಕ್ಕನ್ನು ಬಿಚ್ಚಿಟ್ಟಿದ್ದರು. ಪ್ರತಿ ಸೂರ್ಯೋದಯ ಒಂದೊಂದು ತತ್ವವನ್ನು ಹೊಂದಿದ್ದು, ಇದನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮೊದಲೇ ಹೇಳಿದ್ದಾರೆ.

ಪ್ರಧಾನಿ ಮೋದಿಯ ಕುಂಡಲಿಯನ್ನು ನೋಡಿದೆ. ಇನ್ನಷ್ಟು ಅಧ್ಯಯನ ಮಾಡಿದಾಗ, ಸೂರ್ಯೋದಯ ಧನುರಾಶಿಯಲ್ಲಿ ಆಗುತ್ತಿದೆ. ಪ್ರಾರಂಭದಲ್ಲಿ ಆತಂಕ ಎಂಬುದು ಅರವಿಗೆ ಬಂತು. ವಿರೋಧ ಪಕ್ಷ ಅಂದರೆ ಶನಿ. ಒಂದು ಬಾರಿ ಶನಿಗೆ ಮೇಲುಗೈ ಆಗುತ್ತದೆ. ನಂತರ ಸೂರ್ಯನ ಪ್ರಖರತೆ ಹೆಚ್ಚಾಗುತ್ತಿರುವಾಗ ಶನಿಯ ಪ್ರಭಾವ ಕಮ್ಮಿಯಾಗಿ ಅಧಿಕಾರದಲ್ಲಿರುವ ಬಿಜೆಪಿಯ ಸೀಟುಗಳ ಸಂಖ್ಯೆ ಜಾಸ್ತಿಯಾಗುತ್ತದೆ ಎಂದು ಹೇಳಿದರು.

ಈ ಹಿಂದೆಯೂ ಹಲವು ಎಲೆಕ್ಷನ್ ಬಗ್ಗೆ ಬರೆದಿದ್ದೇನೆ. ಮಹಾರಾಷ್ಟ್ರ ಸಿಎಂ ಫಡ್ನವಿಸ್ ಗೆ ಇ-ಮೇಲ್ ಮಾಡಿ ಕೆಲವು ಸಲಹೆ ನೀಡಿದ್ದೇನೆ. ಅದನ್ನು ಅವರು ಫಾಲೋ ಮಾಡಿದ್ದಾರೆ. ವಾಪಾಸ್ ಇ-ಮೇಲ್ ಸಂದೇಶ ಕಳಿಸಿದ್ದಾರೆ ಎಂದು ಹೇಳಿದರು.

ಸೂರ್ಯ ಉದಯವಾದಾಗ ಆಡಳಿತ ಪಕ್ಷಕ್ಕೆ ಆತಂಕದ ಸ್ಥಿತಿ ಇರುತ್ತದೆ. ರವಿ ಕೇಂದ್ರ ಸರ್ಕಾರ ಸೂಚಿಸುವವ, ಶನಿ ರಾಜಕಾರಣಿ. ಲಗ್ನದಲ್ಲಿ ಯುದ್ಧಸ್ಥಿತಿ ಇರುತ್ತದೆ. 8-9 ಗಂಟೆಯವರೆಗೆ ಶನಿಯ ಪ್ರಭಾವ ಇರುತ್ತದೆ. ನಂತರ ಸೂರ್ಯನ ಪ್ರಭಾವ ಶುರುವಾಗುತ್ತದೆ. ವಾರದ ಹಿಂದೆ ಚುನಾವಣೆ ಆಗಿದ್ದರೆ, ಲೆಕ್ಕಾಚಾರ ಮಾಡಿದ್ದರೆ ನಮ್ಮ ಲೆಕ್ಕಾಚಾರವೇ ಬೇರೆಯಾಗುತ್ತಿತ್ತು ಎಂದರು. ಜಗತ್ತಿನ ಪ್ರತಿ ಕ್ಷಣದ ನಿರ್ಧಾರಗಳು ಮುಂದಿನ ಲೆಕ್ಕಾಚಾರಕ್ಕೆ ಅಡಿಗಲ್ಲು. ಜಿಎಸ್‍ಟಿ ಮತ್ತು ನೋಟ್ ಬ್ಯಾನ್ ಮಾಡದಿದ್ದರೆ ಇನ್ನೂ ಹೆಚ್ಚಿನ ಸೀಟು ಬಿಜೆಪಿಗೆ ಬರುತ್ತಿತ್ತು. ಒಂದು ವರ್ಷದ ನಂತರ ಚುನಾವಣೆ ನಡೆದಿದ್ದರೆ 150 ಸೀಟುಗಳನ್ನು ಗಳಿಸುತ್ತಿತ್ತು. ಜಿಎಸ್‍ಟಿ ಜನೋಪಯೋಗಿ ಆಗಲು ಇನ್ನೂ ಸಮಯ ಬೇಕು ಎಂದರು.

ಕಾಂಗ್ರೆಸ್ ನ ಚಾಲಕನ ಗ್ರಹಗತಿ ಸರಿಯಿಲ್ಲ: ರಾಹುಲ್ ಗಾಂಧಿಗೆ ಚಂದ್ರ ದೆಶೆಯಲ್ಲಿ ಶನಿಭುಕ್ತಿ ನಡೆಯುತ್ತಿದೆ. ಜೊತೆಗೆ ಪಕ್ಷದ ಅಧ್ಯಕ್ಷನ ಪಟ್ಟವೂ ಬಂತು. ಷಷ್ಟಾಷ್ಟಮದಲ್ಲಿ ರಾಹುಲ್ ಗಾಂಧಿಯ ಮಾನಸಿಕ ಸ್ಥಿತಿಗತಿ ಸರಿ ಇರುವುದಿಲ್ಲ. ಈ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರಗಳು ತಪ್ಪಾಗುತ್ತದೆ. ಅದು ರಾಹುಲ್ ಗಾಂಧಿಯ ತಪ್ಪಲ್ಲ. ಅವರ ಗ್ರಹಗತಿಯ ಸಮಸ್ಯೆ. ಮಹೂರ್ತಗಳು ಸರಿ ಇಲ್ಲದೆ ಇರುವಾಗ, ಶನಿಭುಕ್ತಿ ಇರುವಾಗ ಹಿನ್ನಡೆಗಳಾಗುತ್ತದೆ. ರಾಹುಲ್ ಗಾಂಧಿ ಚುನಾವಣಾ ರಾಜಕೀಯದಿಂದ ದೂರ ಉಳಿದರೆ ಒಳ್ಳೆಯದು. ಅವರ ಜಾತಕಕ್ಕೂ ರಾಜಕಾರಣಕ್ಕೂ ಹೊಂದಾಣಿಕೆ ಆಗುವುದಿಲ್ಲ ಎಂದು ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.

ಮೋದಿಯ ಅಗ್ನಿಪರೀಕ್ಷೆ ನಡೆಯುತ್ತಿದೆ: ಪ್ರಧಾನಿ ಮೋದಿಯ ಜಾತಕ ನೋಡಿದ್ದೇನೆ. ಚಂದ್ರದೆಶೆಯಲ್ಲಿ ಶನಿಭುಕ್ತಿ ದಾಟಿದೆ. ಎಲ್ಲರೂ ನಾಯಕ ಎಂದು ಒಪ್ಪಿಕೊಳ್ಳುವ ಜಾತಕ ಅದು. ಅವರ ಸಾಧನೆಗಳು ಇನ್ನಷ್ಟು ಪ್ರತಿಫಲಿಸಲು ಒಂದು ವರ್ಷ ಬೇಕು. ಈಗಿನ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಾದರೆ, ಅದರ ಲಾಭ ಜನರನ್ನು ಮುಟ್ಟಬೇಕಾದರೆ ಇನ್ನೂ ಒಂದು ವರ್ಷ ದಾಟಬೇಕು. ಜನರಿಗೆ ಅನುಭವಕ್ಕೆ ಬರಲು ಸಮಯ ತೆಗೆದುಕೊಳ್ಳುತ್ತದೆ. ಇಡೀ ಜಗತ್ತೇ ಪ್ರಧಾನಿಯನ್ನು ಪ್ರಶಂಸೆ ಮಾಡುತ್ತಿದೆ ಎಂದರೆ ಅದಕ್ಕೆ ವಿರುದ್ಧ ನುಡಿಯುವುದು ತಪ್ಪು. ಈಗಿನ ನಿರ್ಧಾರ ಕಠಿಣ ಎಂದಿದ್ದಾರೆ.

ಜನರ ಆಯ್ಕೆಯನ್ನು ಗೌರವಿಸಿಕೊಂಡು ಮುನ್ನಡೆಯಬೇಕು. ವಿಪಕ್ಷದವರು ಮೋದಿಯನ್ನು ನೀಚ ಎಂದರು. ಇದನ್ನು ಜನರ ಮುಂದೆ ಇಟ್ಟಾಗ ಅವರಿಗೇ ಅದು ಹಿಂದೇಟಾಯಿತು. ರಾಜಕಾರಣಿಗಳ ಮೇಲೆ ಹಲವು ಕೋಟಿ ಕಣ್ಣುಗಳು ಇರುತ್ತದೆ. ಜಾಗ್ರತೆಯಿಂದ ಇರುವುದು ಉತ್ತಮ. ಪ್ರತಿ ಮಾತುಗಳು ಟೀಕೆಗೆ ಕಾರಣವಾಗುತ್ತದೆ ಎಂದು ಪ್ರಕಾಶ್ ಅಮ್ಮಣ್ಣಾಯ ಹೇಳುತ್ತಾರೆ. ತಪ್ಪು ಮಾತನಾಡುವುದು ಸರಿಯಲ್ಲ. ಜನ ಯಾರ ಪರ ಇದ್ದಾರೆ. ಪರಿಸ್ಥಿತಿ ಯಾರ ಪರವಾಗಿದೆ ಎಂದು ನೋಡಿಕೊಂಡು ಮಾತನಾಡಬೇಕು. ಕೆಟ್ಟ ವಚನಗಳು ಮನಸ್ಸಿಗೆ ಪರಿಣಾಮ ಬೀರುತ್ತದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *