ಬೆಚ್ಚಿ ಬೀಳಿಸಿದ ಮಹಿಳೆಯರ ಕೊಲೆ – ದೇಹವನ್ನು ತುಂಡರಿಸಿ ಕಾಲುವೆಗೆ ಎಸೆದ ಕಟುಕರು

Public TV
2 Min Read

ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ದಿನೇ ದಿನೇ ಕೊಲೆಗಳ ಸಂಖ್ಯೆ ಹೆಚ್ಚುತ್ತಿವೆ. ಇದೀಗ ಮಂಡ್ಯ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರನ್ನು ಕೊಲೆಘಾತುಕರು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಇದನ್ನೂ ಓದಿ: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ಕೊಂದ ಪೋಷಕರು

ಮಂಡ್ಯ ಜಿಲ್ಲೆಯ ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕಿನ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಎರಡು ಮಹಿಳೆಯರ ಮೃತ ಶವ ಪತ್ತೆಯಾಗಿದೆ. ಈ ಅಪರಿಚಿತ ಮಹಿಳೆಯರನ್ನು ಕೊಲೆಘಾತುಕರು ಕೊಲೆ ಮಾಡಿದ ನಂತರ ದೇಹವನ್ನು ಎರಡು ತುಂಡುಗಳನ್ನಾಗಿ ಮಾಡಿ ಕಾಲಿಗೆ ಹಗ್ಗ ಕಟ್ಟಿ ಕಾಲುವೆಗೆ ಎಸೆದಿದ್ದಾರೆ. ಇದೀಗ ಆ ಮಹಿಳೆಯರ ಸೊಂಟದ ಕೆಳಭಾಗ ಕತ್ತರಿಸಿದ ದೇಹದ ತುಂಡು ಮಾತ್ರ ಬೆಳಕಿಗೆ ಬಂದಿದೆ.

ಪಾಂಡವಪುರ ತಾಲೂಕಿನ ಬೇಬಿ ಗ್ರಾಮದ ಕೆರೆಯ ಕಾಲುವೆಯಲ್ಲಿ ತೇಲಿ ಬಂದ 30 ರಿಂದ 31 ವರ್ಷ ಮಹಿಳೆಯ ಕತ್ತರಿಸಿದ ಅರ್ಧ ದೇಹ ನಿನ್ನೆ ಸಂಜೆ ಗದ್ದೆಗೆ ಹೋಗಿದ್ದ ರೈತರ ಕಣ್ಣಿಗೆ ಬಿದ್ದಿದೆ. ಇದನ್ನು ಕಂಡ ರೈತರು ಬೆಚ್ಚಿ ಬಿದ್ದಿದ್ದಾರೆ. ಇದೇ ಮಾದರಿಯಲ್ಲಿ ಕೊಲೆಯಾಗಿರುವ 40 ರಿಂದ 45 ವರ್ಷದ ಮಹಿಳೆಯ ತುಂಡರಿಸಿದ ಅರ್ಧ ದೇಹ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಗದ್ದೆಯ ಹಳ್ಳದಲ್ಲಿ ಪತ್ತೆಯಾಗಿದೆ. ಅರಕೆರೆಯ ಚಿಕ್ಕ ದೇವರಾಜ ನಾಲೆಯಿಂದ ಈ ಅರ್ಧ ದೇಹ ಹಳ್ಳಕ್ಕೆ ತೇಲಿ ಬಂದಿದೆ. ಇಂದು ಬೆಳಗ್ಗೆ ಈ ಹಳ್ಳಕ್ಕೆ ವ್ಯಕ್ತಿಯೋರ್ವ ಮೀನು ಹಿಡಿಯಲು ಹೋದ ಸಂದರ್ಭದಲ್ಲಿ ಈ ದೃಶ್ಯಕಂಡು ಹೆದರಿಕೊಂಡು ಓಡಿ ಬಂದಿದ್ದಾನೆ. ನಂತರ ಸ್ಥಳೀಯರಿಗೆ ಈ ಬಗ್ಗೆ ಹೇಳಿದ್ದಾನೆ. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪಾಂಡವಪುರ ಮತ್ತು ಅರಕೆರೆ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಾಲಕಿಯರಿಗೆ ರೈಫಲ್, ಸೂಸೈಡ್ ಬಾಂಬ್ ತರಬೇತಿ ನೀಡಿದ್ದೆ – ಐಸಿಸ್ ಸೇರಿದ್ದ ಶಿಕ್ಷಕಿಯಿಂದ ತಪ್ಪೊಪ್ಪಿಗೆ

ಒಟ್ಟಾರೆ ಈ ಇಬ್ಬರು ಮಹಿಳೆಯರ ಬರ್ಬರ ಕೊಲೆಯಿಂದ ಸಕ್ಕರೆ ನಾಡು ಮಂಡ್ಯದ ಜನರು ಬೆಚ್ಚಿ ಬಿದ್ದಿದ್ದಾರೆ. ಇದೀಗ ಪೊಲೀಸರು ಉಳಿದ ದೇಹದ ತುಂಡು, ಕೊಲೆಯಾದ ಮಹಿಳೆಯರು ಯಾರು, ಈ ರೀತಿ ಭಯಾನಕವಾಗಿ ಕೊಲೆ ಮಾಡಿರುವ ಕೊಲೆಗಾರರು ಯಾರು ಎಂದು ಮಂಡ್ಯ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *