ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿ(Husband-Wife) ನಡುವೆ ನಡೆಯುತ್ತಿದ್ದ ಕಲಹಕ್ಕೆ ಎರಡು ಪುಟ್ಟ ಜೀವಗಳು ಬಲಿಯಾಗಿವೆ. ಮಕ್ಕಳಿಗೆ ಹಾಲಿನಲ್ಲಿ ಇಲಿ ಪಾಷಾಣ ಬೆರೆಸಿ ಕುಡಿಸಿ, ತಾನೂ ಸೇವಿಸಿ ತಾಯಿಯೊಬ್ಬಳು ಆತ್ಮಹತ್ಯೆಗೆ(Suicide) ಯತ್ನಿಸಿದ ದಾರುಣ ಘಟನೆ ಯಶವಂತಪುರದ(Yeswanthpur) ಮತ್ತಿಕೆರೆಯಲ್ಲಿ ಸಂಭವಿಸಿದೆ.
ಘಟನೆಯಲ್ಲಿ ನಾಲ್ಕು ವರ್ಷದ ನಿವೇದ್ ಚೌದರಿ ಮತ್ತು ಎರಡು ವರ್ಷದ ನಿರ್ಮಲ್ ಚೌದರಿ ಮೃತಪಟ್ಟ ದುರ್ದೈವಿಗಳು. ಆತ್ಮಹತ್ಯೆಗೆ ಯತ್ನಿಸಿದ ತಾಯಿ ಪವಿತ್ರಾ ಸ್ಥಿತಿ ಗಂಭೀರವಾಗಿದ್ದು, ಪ್ರಸ್ತುತ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಮೂಲತಃ ಪಾವಗಡದವರಾದ ಪ್ರಶಾಂತ್ ಎಂಬುವವರು ಕಳೆದ ಐದಾರು ವರ್ಷಗಳಿಂದ ಮತ್ತಿಕೆರೆಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಮತ್ತು ಪತ್ನಿ ಪವಿತ್ರಾ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.
ಶನಿವಾರ ಸಂಜೆ ಕೂಡ ದಂಪತಿ ನಡುವೆ ಜೋರಾಗಿ ಜಗಳ ನಡೆದಿದ್ದು, ಇದರಿಂದ ತೀವ್ರ ಮನನೊಂದ ಪವಿತ್ರಾ ರಾತ್ರಿ ವೇಳೆ ಮಕ್ಕಳಿಗೆ ಹಾಲಿನಲ್ಲಿ ಇಲಿ ಪಾಷಾಣ ಬೆರೆಸಿ ಕುಡಿಸಿ, ಬಳಿಕ ತಾನೂ ಸೇವಿಸಿದ್ದಾರೆ. ಇದನ್ನೂ ಓದಿ: ಹಳಿ ಮೇಲೆ ಕೆಲಸ ಮಾಡುತ್ತಿದ್ದ ನೌಕರನಿಗೆ ರೈಲು ಡಿಕ್ಕಿ – ಗಂಭೀರ ಗಾಯ
ಇಂದು ಮುಂಜಾನೆ ಪ್ರಶಾಂತ್ ಎದ್ದಾಗ ಪತ್ನಿ ಮತ್ತು ಮಕ್ಕಳು ಅಸ್ವಸ್ಥಗೊಂಡಿರುವುದು ಕಂಡುಬಂದಿದೆ. ಕೂಡಲೇ ಸ್ಥಳೀಯರ ನೆರವಿನೊಂದಿಗೆ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಮಕ್ಕಳಿಬ್ಬರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇದನ್ನೂ ಓದಿ: 30 ಲಕ್ಷ ಕೊಡ್ತೀನಿ, ವಿಶೇಷ ಪೂಜೆಗೆ ಬೆತ್ತಲೆ ಫೋಟೋ ಕಳಿಸು – ಮಹಿಳೆಗೆ ಜ್ಯೋತಿಷಿ ಟಾರ್ಚರ್

