ಬೈಕ್‍ಗೆ ಬಸ್ ಡಿಕ್ಕಿಯಾಗಿ ಸವಾರರಿಬ್ಬರು ಸಾವು – ಗದ್ದೆಗೆ ಉರುಳಿತು 40 ಪ್ರಯಾಣಿಕರಿದ್ದ ಬಸ್

Public TV
1 Min Read

ರಾಯಚೂರು: ನಗರದಲ್ಲಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, 40 ಜನರಿಗೆ ಅದರಲ್ಲೂ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿಂಧನೂರಿನ ಮಲ್ಲಯ್ಯ ಕ್ಯಾಂಪ್ ಮತ್ತು ವಿರುಪಾಪುರ ಬಳಿ ನಡೆದಿದೆ.

ಬೈಕ್‍ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಅಪಘಾತ ಜಿಲ್ಲೆಯ ಸಿಂಧನೂರಿನ ಮಲ್ಲಯ್ಯ ಕ್ಯಾಂಪ್ ಬಳಿ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ಮೂಲತಃ ಬಿಹಾರದ ನಿವಾಸಿಗಳಾಗಿದ್ದು, ಅಸ್ಫಾಕ್ (35) ಹಾಗೂ (24) ಮಂಜುನಾಥ ಎಂದು ಗುರುತಿಸಲಾಗಿದೆ.

ಅಸ್ಫಾಕ್ ಮತ್ತು ಮಂಜುನಾಥ ಇಬ್ಬರು ಒಂದೇ ಬೈಕ್‍ನಲ್ಲಿ ಮಸ್ಕಿಯಿಂದ ಸಿಂಧನೂರಿಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಮಲ್ಲಯ್ಯ ಕ್ಯಾಂಪ್ ಬಳಿ ಬರುತ್ತಿದ್ದಂತೆ ವೇಗವಾಗಿ ಬಂದ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ.

ಇನ್ನೂ ರಾಯಚೂರಿನ ಸಿಂಧನೂರಿನ ವಿರುಪಾಪುರ ಬಳಿ 40 ಪ್ರಯಾಣಿಕರಿದ್ದ ಸಾರಿಗೆ ಬಸ್ ಗದ್ದೆಗೆ ಉರುಳಿ ಬಿದ್ದಿದೆ. ಬಸ್ಸಿನಲ್ಲಿ ಅಧಿಕ ಮಂದಿ ವಿದ್ಯಾರ್ಥಿಗಳಿದ್ದು, ಅವರಿಗೆ ಗಂಭೀರವಾಗಿ ಗಾಯಗಳಾಗಿವೆ. ಇನ್ನುಳಿದ ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸಿಂಧನೂರಿಗೆ ಬರುತ್ತಿದ್ದ ಸಾರಿಗೆ ಬಸ್ ನಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಇತರೆ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿ ಬಸ್ ವಿರುಪಾಪುರದ ಬಳಿ ಗದ್ದೆಗೆ ಉರುಳಿದೆ. ತಕ್ಷಣ ಗಾಯಾಳುಗಳನ್ನ ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಆರಿಫಾ, ಹುಚ್ಚಪ್ಪ ಎಂಬ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.

ಈ ಎರಡು ಘಟನೆ ಸಂಬಂಧ ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *