ಚಿಕ್ಕಬಳ್ಳಾಪುರ: ಕೆಎಸ್ಆರ್ಟಿಸಿ ಬಸ್ ಹಾಗೂ ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕ್ರೂಸರ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ನಲ್ಲಗುಟ್ಟಪಾಳ್ಯದ ಬಳಿ ನಡೆದಿದೆ.
ಕ್ರೂಸರ್ ಚಾಲಕ ಜಂಗಮಾರಪನಹಳ್ಳಿ ಗ್ರಾಮದ ಶ್ರೀನಿವಾಸ್ (27) ಹಾಗೂ ವೆಂಕಟೇಶಪ್ಪ (70) ಮೃತ ದುರ್ದೈವಿಗಳು. ಭೀಕರ ಅಪಘಾತದಲ್ಲಿ ಕ್ರೂಸರ್ ವಾಹನ ಕೆಎಸ್ಆರ್ ಟಿಸಿ ಬಸ್ ಒಳಗೆ ತೂರಿಕೊಂಡಿದ್ದು, ಚಾಲಕ ಶ್ರೀನಿವಾಸ್ ಹಾಗೂ ವೆಂಕಟೇಶಪ್ಪ ಮೃತ ದೇಹಗಳು ಕ್ರೂಸರ್ ವಾಹನದಲ್ಲೇ ಸಿಲುಕಿಕೊಂಡಿವೆ.
ಕೆಎಸ್ಆರ್ಟಿಸಿ ಬಸ್ ನಾಸ್ತಿಮನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ಹೋಗುತ್ತಿತ್ತು. ಈ ಸಂದರ್ಭಧಲ್ಲಿ ಕೆಎಸ್ಆರ್ಟಿಸಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕ್ರೂಸರ್ಗೆ ಡಿಕ್ಕಿ ಹೊಡೆದಿದೆ. ಕೆಎಸ್ಆರ್ಟಿಸಿ ಬಸ್ ಸ್ಟೇರಿಂಗ್ ಕಟ್ ಆಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕ್ರೂಸರ್ ನಲ್ಲಿದ್ದ ಐವರಿಗೆ ಗಂಭೀರ ಗಾಯಗಳಾಗಿದ್ದು, ಉಳಿದಂತೆ ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ. ಸ್ಥಳೀಯರು ಗಾಯಾಳುಗಳನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ ಕ್ರೂಸರ್ ನಲ್ಲೇ ಸಿಲುಕಿ ಹಾಕಿಕೊಂಡಿರುವ ಮೃತದೇಹಗಳನ್ನು ಹೊರತೆಗೆಯಲು ಹರಸಾಹಸ ಪಡುತ್ತಿದ್ದಾರೆ.