ಚಿಕ್ಕಬಳ್ಳಾಪುರ: ಮನೆಯ ಮುಂಭಾಗದ ಕುಡಿಯುವ ನೀರಿನ ನಲ್ಲಿಯ ವಿಚಾರಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ, ಎರಡು ಕುಟುಂಬಸ್ಥರು ಪರಸ್ಪರ ದೊಣ್ಣೆ ಮತ್ತು ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವೆಂಕಟೇನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ವೆಂಕಟಪತಿ ಮತ್ತು ಮುನಿಕೃಷ್ಣಪ್ಪ ಎಂಬವರ ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಮಹಿಳೆಯರ ನಡುವೆ ಸೋಮವಾರ ಸಂಜೆ ನೀರಿನ ವಿಚಾರಕ್ಕೆ ಜಗಳವಾಗಿದ್ದು, ರಾತ್ರಿ ಪರಸ್ಪರ ಮಾತಿನ ಚಕಮಕಿ ನಡೆಸಿಕೊಂಡು ಸುಮ್ಮನಾಗಿದ್ದರು. ನಂತರ ಬೆಳಗ್ಗೆ ಪುನಃ ನೀರಿನ ವಿಚಾರವಾಗಿಯೇ ವೆಂಕಟಪತಿ ಮನೆಯವರು ಖ್ಯಾತೆ ತೆಗೆದಿದ್ದಾರೆ ಎನ್ನಲಾಗಿದ್ದು, ಪರಸ್ಪರ ದೊಣ್ಣೆ ಮತ್ತು ಚಾಕುವಿನಿಂದ ಎರಡು ಕುಟುಂಬಸ್ಥರು ಹೊಡೆದಾಡಿಕೊಂಡಿದ್ದಾರೆ.
ಈ ವೇಳೆ ಮುನಿಕೃಷ್ಣಪ್ಪನ ಎದೆಗೆ ವೆಂಕಟಪತಿ ಕುಟುಂಬಸ್ಥರು ಚಾಕುವಿನಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಮುನಿಕೃಷ್ಣಪ್ಪನ ಎದಗೆ ಚಾಕುವಿನಿಂದ ಇರಿದ ಪರಿಣಾಮ ಚಾಕು ಇರಿತ ಲಿವರ್ ಗೆ ಹೊಕ್ಕಿ ರಕ್ತಸ್ರಾವವಾಗ್ತಿದೆ. ಹೀಗಾಗಿ ಗಾಯಾಳು ಮುನಿಕೃಷ್ಣಪ್ಪನನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಹಲ್ಲೆಯಲ್ಲಿ ಮುನಿಕೃಷ್ಣಪ್ಪ ಕುಟುಂಬದವರು ಹಾಗೂ ವೆಂಕಟಪತಿ ಕುಟುಂಬದ ಹಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಗಾಯಾಳುಗಳು ಸ್ಥಳೀಯ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ವಿಜಯಪುರ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.