ರಾಜ್ಯ ಒಕ್ಕಲಿಗರ ಸಂಘದಲ್ಲಿ ಮಹಾಬಿರುಕು!

Public TV
1 Min Read

ಬೆಂಗಳೂರು: ಸದಾ ಒಂದಲ್ಲೊಂದು ವಿಚಾರದಲ್ಲಿ ಸುದ್ದಿಯಾಗಿರೊ ರಾಜ್ಯ ಒಕ್ಕಲಿಗರ ಸಂಘದಲ್ಲಿ ಇದೀಗ ಮಹಾಬಿರುಕು ಬಿಟ್ಟಿದೆ.

ಅಂದು ಸಂಘದ ಅಧ್ಯಕ್ಷರಾಗಿದ್ದ ಡಾ.ಅಪ್ಪಾಜಿಗೌಡರನ್ನ ಕೆಳಗಿಸಲು ಬಳಸಿದ ರಣತಂತ್ರ, ಈಗಿನ ಅಧ್ಯಕ್ಷರಿಗೆ ಮುಳುವಾಗಿ ಪರಿಣಮಿಸಿದೆ ಎನ್ನಲಾಗಿದೆ. ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಜ್ಜಾಗಿದ್ದು, ಸಂಘದ ಪದಾಧಿಕಾರಿಗಳು, ನಿರ್ದೇಶಕರು ಬೆಟ್ಟೇಗೌಡ ಮತ್ತು ಅವರ ತಂಡದ ವಿರುದ್ಧ ತಿರುಗಿಬಿದ್ದಿದ್ದಾರೆ.

ಸಂಘದ ಅಧ್ಯಕ್ಷ ಡಿಎನ್ ಬೆಟ್ಟೇಗೌಡ, ಕಾರ್ಯದರ್ಶಿ ಪ್ರೋ ಎಂ ನಾಗರಾಜ್, ಖಜಾಂಚಿ ಡಿಸಿಕೆ ಕಾಳೇಗೌಡರಿಂದಲೇ ಒಕ್ಕಲಿಗ ಸಂಘದಲ್ಲಿ ಭಾರಿ ಸಮಸ್ಯೆ ಎದುರಾಗಲು ಕಾರಣವಾಗುತ್ತಿದೆಯಂತೆ. 270 ಜನರನ್ನು ಸಂಘಕ್ಕೆ ನೇಮಕ ಮಾಡಿಕೊಳ್ಳಲು ಸಂಘದ ಸಭೆಯಲ್ಲಿ ತೀರ್ಮಾನವಾಗಿತ್ತು. ಆದ್ರೆ 700ಕ್ಕೂ ಹೆಚ್ಚು ಜನರನ್ನು ಬೆಟ್ಟೇಗೌಡ ಮತ್ತು ಅವರ ತಂಡ ನೇಮಕ ಮಾಡಿಕೊಂಡಿದ್ದಾರೆ. ಈಗಲೇ ಇರೋ ಸಿಬ್ಬಂದಿ, ನೌಕರರುಗಳಿಗೆ ಸಂಬಳವನ್ನು ತಿಂಗಳ ಮಧ್ಯದಲ್ಲಿ ನೀಡುತ್ತಿದ್ದಾರೆ. ಇದರಿಂದಾಗಿ ಸಂಘದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಸಂಘದ ಪದಾಧಿಕಾರಿಗಳು, ನಿರ್ದೇಶಕರು ಒಕ್ಕಲಿಗರ ಸಂಘಕ್ಕೆ ಇಂದು ಅವಿಶ್ವಾಸ ಪತ್ರ ನೀಡಿ ಆರೋಪಿಸಿದ್ದಾರೆ.

ಒಕ್ಕಲಿಗ ಸಂಘದ ನಾಲ್ಕು ಜನ ಪದಾಧಿಕಾರಿಗಳು ಸೇರಿದಂತೆ 19 ಜನ ನಿರ್ದೇಶಕರು ಅವಿಶ್ವಾಸ ನಿರ್ಣಯಕ್ಕೆ ಸಹಮತವಿದೆ ಎಂದು ಸಂಘಕ್ಕೆ ಪತ್ರವನ್ನು ಬರೆದಿದ್ದರು. ಇನ್ನೂ ಈ ಬಗ್ಗೆ ಒಕ್ಕಲಿಗರ ಸಂಘ ಕಾರ್ಯದರ್ಶಿ ಪ್ರೊ. ನಾಗರಾಜ್ ಮಾತನಾಡಿದ್ದು, ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿ, ಇದು ಪ್ರಜಾಪ್ರಭುತ್ವ ಸಂಘದ ಬೈಲಾ ಪ್ರಕಾರ ಅವಿಶ್ವಾಸ ನಿರ್ಣಯ ಮಂಡನೆಗೆ ಏಳು ದಿನ ಕಾಲಾವಕಾಶವಿದೆ. ಅಷ್ಟರೊಳಗೆ ಅವಿಶ್ವಾಸ ಸಾಬೀತು ಪಡಿಸಬೇಕು. ಇಲ್ಲವಾದಲ್ಲಿ ಕೂಡಲೆ ಸ್ಥಾನ ಬಿಟ್ಟು ಕೊಡುತ್ತೇನೆ. ಅಲ್ಲಿಯವರೆಗೂ ಏನ್ ಬೇಕಾದ್ರೂ ಆಗಬಹುದು, ಕಾದುನೋಡಿ ಎಂದಿದ್ದಾರೆ.

ಒಕ್ಕಲಿಗರ ಸಂಘದ ಈ ಹಿಂದಿನ ಅಧ್ಯಕ್ಷ ಡಾ ಅಪ್ಪಾಜಿಗೌಡರ ವಿರುದ್ಧ ಬೆಟ್ಟೇಗೌಡ ಅವಿಶ್ವಾಸ ನಿರ್ಣಯ ಮಂಡಿಸಿ ನೂತನವಾಗಿ ಅಧ್ಯಕ್ಷರಾಗಿದ್ದರು. ಈಗ ಅದೇ ಮಾದರಿಯಲ್ಲಿ ಮತ್ತೆ ಬೆಟ್ಟೇಗೌಡರನ್ನು ಇಳಿಸಲು ಸಜ್ಜಾಗುತ್ತಿದೆ. ಡಿಸೆಂಬರ್‍ನಲ್ಲಿ ಸಂಘದ ಚುನಾವಣಾ ನಡೆಯಲಿದ್ದು, ಈ ಹೊತ್ತಿನಲ್ಲಿ ಅವಿಶ್ವಾಸ ನಿರ್ಣಯ ಪತ್ರ ಕುತೂಹಲ ಮೂಡಿಸಿದೆ ಎಂದು ಸಂಘದ ಕಾರ್ಯದರ್ಶಿ ಪ್ರೋ. ನಾಗರಾಜು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *