ಇಬ್ಬರು ಅತೃಪ್ತ ಶಾಸಕರು ನನ್ನನ್ನು ಸಂಪರ್ಕಿಸಿದ್ದು ನಿಜ: ಸಿದ್ದರಾಮಯ್ಯ

Public TV
2 Min Read

ಬೆಂಗಳೂರು: ಕೆಲವು ಅತೃಪ್ತ ಶಾಸಕರು ಕರೆ ಮಾಡಿದ್ದು ನಿಜ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇದೀಗ ಸ್ವತಃ ಸಿದ್ದರಾಮಯ್ಯನವರೇ, ಕೆಲವು ಅತೃಪ್ತ ಶಾಸಕರು ನನ್ನನ್ನು ಸಂಪರ್ಕಿಸಿದ್ದು ನಿಜ. ಅವರೊಂದಿಗೆ ಮಾತನಾಡಬಾರದು ಎಂದು ನಾನು ಕರೆ ಸ್ವೀಕರಿಸಲಿಲ್ಲ. ಅನರ್ಹತೆ ಶಿಕ್ಷೆಗೆ ಹೆದರಿ ನನಗೆ ಕರೆ ಮಾಡಿದ್ದರು. ಹೀಗಾಗಿ ನಾನು ಕರೆ ಸ್ವೀಕರಿಸಿಲ್ಲ ಎಂದು ಹೇಳುವ ಮೂಲಕ ಎಂ.ಬಿ.ಪಾಟೀಲ್ ಅವರ ಹೇಳಿಕೆಯನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಯಾವ ಶಾಸಕರು ಬರುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಅವರು ಬಂದಿದ್ದರೆ ಕುಮಾರಸ್ವಾಮಿ ಅವರ ಸರ್ಕಾರ ಉರುಳುತ್ತಿರಲಿಲ್ಲ. ಇವರನ್ನು ಬಂಧಿಸಿಟ್ಟುಕೊಳ್ಳದಿದ್ದರೆ ಸರ್ಕಾರ ಸುಗಮವಾಗಿರುತ್ತಿತ್ತು. ಶಾಸಕರನ್ನು ಬಿಜೆಪಿಯವರು ಕೂಡಿ ಹಾಕಿಕೊಂಡಿದ್ದಾರೆ. ಇದು ಜನರ ಸರ್ಕಾರವಲ್ಲ, ಹಾರ್ಸ್ ಟ್ರೇಡಿಂಗ್ ಸರ್ಕಾರ. ಇದು ಸಂವಿಧಾನ ಬದ್ಧ ಸರ್ಕಾರವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಚ್.ವಿಶ್ವನಾಥ್ ಹೇಳಿದ್ದೇನು?
ಯಾವ ಶಾಸಕರೂ ಸಹ ಯಾರನ್ನೂ ಸಂಪರ್ಕಿಸಿಲ್ಲ, ಮೈತ್ರಿ ನಾಯಕರೂ ಸಹ ನಮ್ಮನ್ನು ಸಂಪರ್ಕಿಸಿಲ್ಲ. ಎಂ.ಬಿ.ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಾಯಕರ ಹೇಳಿಕೆಗಳು ಹಸಿ ಸುಳ್ಳು ಎಂದು ರೆಬೆಲ್ ಶಾಸಕ ಎಚ್.ವಿಶ್ವನಾಥ್ ಸ್ಪಷ್ಟಪಡಿಸಿದ್ದರು.

ಯಾವ ಅತೃಪ್ತ ಶಾಸಕರೂ ಸಹ ಯಾರನ್ನೂ ಸಂಪರ್ಕಿಸಿಲ್ಲ. ಎಂ.ಬಿ.ಪಾಟೀಲ್ ಹೇಳುತ್ತಿರುವುದು ಹಸಿ ಸುಳ್ಳು. ಕನ್ಫ್ಯೂಸ್ ಮಾಡಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಈ ರೀತಿ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಆದರೆ ಯಾರೂ ದಾರಿ ತಪ್ಪುವುದಿಲ್ಲ. ಅವರೇ ದಾರಿ ತಪ್ಪಿದ್ದಾರೆ. ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಸೇರಿದಂತೆ ಅವರೊಂದಿಗೆ ಇರುವವರು ದಾರಿ ತಪ್ಪಿದ ಮಕ್ಕಳು. ರಾಜ್ಯ ರಾಜಕಾರಣದ ಈ 30 ದಿನಗಳ ಬೆಳವಣಿಗೆಯಲ್ಲಿ ಅವರು ದಾರಿ ತಪ್ಪಿದ ಮಕ್ಕಳು ಎಂದು ವ್ಯಂಗ್ಯವಾಡಿದ್ದರು.

ಯಾವ ನಾಯಕರೂ ಸಹ ಅತೃಪ್ತರನ್ನು ಸಂಪರ್ಕಿಸಲು ಪ್ರಯತ್ನಿಸಿಲ್ಲ. ಅವರು ಪ್ರಯತ್ನಿಸಿದರೂ ಸಹ ಯಾರೂ ಅವರೊಂದಿಗೆ ಹೋಗಲು ಸಿದ್ಧರಿಲ್ಲ. ನಾವು ಎಲ್ಲವನ್ನೂ ಎದುರಿಸಲು ಸಿದ್ಧರಿದ್ದೇವೆ. ಬಂಡೆಯಂತೆ ಗಟ್ಟಿಯಾಗಿ ನಿಂತಿದ್ದೇವೆ. ನಮ್ಮ ನಿರ್ಧಾರವೂ ಸಹ ಅಷ್ಟೇ ಗಟ್ಟಿಯಾಗಿದೆ. ಏಕೆಂದರೆ ನಾವು ಯಾರೂ ದುಡ್ಡಿಗಾಗಿ ಬಂದಿಲ್ಲ. ಸರ್ಕಾರದ ವಿರುದ್ಧ ಅಸಮಾಧಾನದಿಂದ ಹೊರ ಬಂದಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು.

ಇಬ್ಬರು ಅತೃಪ್ತ ಶಾಸಕರು ಶುಕ್ರವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದ್ದರು. ಆದರೆ ಸಿದ್ದರಾಮಯ್ಯ ಅವರು ಇಬ್ಬರ ಕರೆಯನ್ನೂ ಸ್ವೀಕರಿಸಿಲ್ಲ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಇಂದು ಬೆಳಗ್ಗೆ ಹೇಳಿದ್ದರು.

ಮಾಜಿ ಸಚಿವ ಎಂ.ಬಿ.ಪಾಟೀಲ್ ಹಾಗೂ ಸಿದ್ದರಾಮಯ್ಯನವರು ಅತೃಪ್ತ ಶಾಸಕರು ಕರೆ ಮಾಡಿರುವುದು ನಿಜ ಎಂದು ಹೇಳುತ್ತಿದ್ದರೆ, ಇತ್ತ ರೆಬೆಲ್ ಶಾಸಕ ಎಚ್.ವಿಶ್ವನಾಥ್ ಅವರು ಯಾವ ಶಾಸಕರೂ ಯಾರನ್ನೂ ಸಂಪರ್ಕಿಸಿಲ್ಲ. ಅದರ ಅಗತ್ಯತೆಯೂ ನಮಗಿಲ್ಲ, ಎಂ.ಬಿ.ಪಾಟೀಲ್ ಹಾಗೂ ಸಿದ್ದರಾಮಯ್ಯ ದಾರಿ ತಪ್ಪಿದ ಮಕ್ಕಳು ಎಂದು ಹರಿಹಾಯ್ದಿದ್ದರು.

Share This Article
Leave a Comment

Leave a Reply

Your email address will not be published. Required fields are marked *