ಕಾರವಾರ: ಲಾರಿ ಮತ್ತು ತೂಫಾನ್ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಮಹಿಳೆ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ರಾಗಿಹೊಸಳ್ಳಿ ಬಳಿ ಘಟನೆ ನಡೆದಿದೆ.
ಗದಗ ಜಿಲ್ಲೆಯ ರೋಣ ಮೂಲದ ರಮೇಶ್ ಮತ್ತು ಕೃಷ್ಣ ಬಾಯಿ ಮೃತ ದುರ್ದೈವಿಗಳು. ರಾಗಿಹೊಸಳ್ಳಿ ಬಳಿಯ ದೇವಿಮನೆ ಘಾಟ್ ನಲ್ಲಿ ಈ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ 10 ಮಂದಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಸಮೀಪದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗದಗ ಜಿಲ್ಲೆಯ ರೋಣದಿಂದ ಗೋಕರ್ಣಕ್ಕೆ 12 ಜನ ಪ್ರವಾಸಕ್ಕೆ ಹೋಗಿದ್ದರು. ಮತ್ತೆ ಅಲ್ಲಿಂದ ಮರಳಿ ಗೋಕರ್ಣದಿಂದ ಶಿರಸಿಗೆ ತೆರಳುವ ವೇಳೆ ದೇವಿಮನೆ ಘಾಟ್ ನ ತಿರುವಿನಲ್ಲಿ ಶಿರಸಿ ಭಾಗದಿಂದ ಬಂದ ಲಾರಿ ನೇರ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ.
ಈ ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.