ಮತ್ತೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಡಿಚ್ಚಿ

Public TV
4 Min Read

ಬೆಂಗಳೂರು: ಲೋಕಸಭೆಯಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಮತ್ತೆ ಟ್ವಿಟ್ಟರ್ ನಲ್ಲಿ ಟಾಂಗ್ ಕೊಟ್ಟಿದ್ದಾರೆ.

ಪ್ರಧಾನಿ ಮೋದಿಯವರೇ, ನನ್ನನ್ನು ಸಂಸತ್ತಿನಲ್ಲಿ ನೆನಪಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಹಾಗೆಯೇ ಬಸವಣ್ಣನವರನ್ನು ನೆನಪಿಸಿಕೊಂಡಿದ್ದಕ್ಕೆ ನನಗೆ ಸಂತಸ ತಂದಿದೆ. ಬಸವಣ್ಣ ಹೇಳಿದಂತೆ ಉಳ್ಳವರು ಶಿವಾಲಯ ಮಾಡುವರಯ್ಯ ನಾನೇನು ಮಾಡಲಿ ಬಡವನಯ್ಯ ಬಸವಣ್ಣನ ವಚನಗಳನ್ನು ತಾವು ಪಾಲಿಸಿದರೆ ಕನ್ನಡಿಗರು ನಿಮಗೆ ಕೃತಜ್ಞರಾಗಿರುತ್ತಾರೆ ಎಂದು ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ.

ಪ್ರಧಾನಿ ಮೋದಿಯವರು ಕಲಬುರಗಿ ಬೀದರ್ ರೈಲ್ವೇ ಯೋಜನೆ ಬಿಜೆಪಿ ಸರ್ಕಾರದಿಂದ ಪೂರ್ಣಗೊಂಡಿದೆ ಎನ್ನುವ ಹೇಳಿಕೆಗೆ ಸಿಎಂ, ಇಡೀ ದೇಶದಲ್ಲಿ 50:50 ಅನುದಾನ ಹಂಚಿಕೆಯ ಮೂಲಕ ರೈಲ್ವೇ ಅಭಿವೃದ್ಧಿ ಯೋಜನೆ ಆರಂಭಿಸಿದ ಮೊದಲ ರಾಜ್ಯ ಕರ್ನಾಟಕ. ಬೀದರ್ ಕಲಬುರಗಿ ಹಳಿ ಕಾಮಗಾರಿ 1,542 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿದ್ದು, ಈ ಯೋಜನೆಗೆ 2007ರಿಂದ ಕರ್ನಾಟಕ ಸರ್ಕಾರ 691 ಕೋಟಿ ರೂ. ಅನುದಾನ ನೀಡಿದೆ. ಅದರಲ್ಲಿ ಶೇ.70ರಷ್ಟು ಹಣ(488 ಕೋಟಿ ರೂ.) ಹಣವನ್ನು 2013ಕ್ಕೆ ನಮ್ಮ ಸರ್ಕಾರ ಬಂದ ನಂತರ ಬಿಡುಗಡೆ ಮಾಡಲಾಗಿದೆ ಎಂದು    ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿ ತಿರುಗೇಟು ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯವನ್ನು ನಿರ್ಧರಿಸುವವರು ಜನತೆಯೇ ಹೊರತು ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಲ್ಲ. ಮೋದಿ ಅಥವಾ ಅಮಿತ್ ಶಾ ಅವರು ಹೇಳಿದಾಕ್ಷಣ ಕಾಂಗ್ರೆಸ್ ಭವಿಷ್ಯ ನಿರ್ಧಾರವಾಗುವುದಿಲ್ಲ. 2019ಕ್ಕೆ ಇವರು ಎಲ್ಲಿರುತ್ತಾರೆ ಅನ್ನೋದನ್ನ ಮೊದಲು ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.

ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂಬುದು ಬಿಜೆಪಿಯವರ ಭ್ರಮೆಯಷ್ಟೇ. ರಾಜಕೀಯ ಮಾಡುವುದಕ್ಕೆ ಬೇರೆ ಬೇರೆ ವೇದಿಕೆಗಳಿವೆ ಎಂಬುದನ್ನು ಬಿಜೆಪಿಯವರು ತಿಳಿದುಕೊಳ್ಳಬೇಕು. ಬೆಂಗಳೂರಿಗೆ ಪ್ರಧಾನಿಯವರು ಬಂದಾಗ ಬರ ಮಾಡಿಕೊಳ್ಳಲಿಲ್ಲ ಎನ್ನುತ್ತಾರೆ. ಅವರು ಬಂದಿದ್ದು ಪಕ್ಷದ ಕಾರ್ಯಕ್ರಮಕ್ಕೆ. ಈ ಹಿಂದೆ ಹಲವು ಬಾರಿ ಪ್ರಧಾನಿಯವರು ಬೆಂಗಳೂರಿಗೆ ಬಂದಾಗ ನಾನು ಬರಮಾಡಿಕೊಂಡಿರಲಿಲ್ಲವೇ ಎಂದು ಪ್ರಶ್ನಿಸಿ ಬಿಜೆಪಿ ನಾಯಕರ ಟೀಕೆಗೆ ಉತ್ತರಿಸಿದರು.

ಮೋದಿ ಹೇಳಿದ್ದು ಏನು?
ಸಿಎಂ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕರ್ನಾಟಕದಲ್ಲಿ ಅಶಾಂತಿ ಮೂಡಲು ಕಾರಣವಾಗಿದೆ. ಕಾಂಗ್ರೆಸ್ ಮೂಲವೇ ವಿಭಜನೆ. ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಪ್ರಯಾಸ ಪಡುತ್ತಿದ್ದಾರೆ ಅಂತಾ ಸರ್ಕಾರದ ಕಾರ್ಯವೈಖರಿ ವಿರುದ್ಧ ಟೀಕೆಗಳ ಸುರಿಮಳೆಗೈದರು.

ಚುನಾವಣೆಗಳಿಗೆ ಕಾಂಗ್ರೆಸ್ ಪಕ್ಷ ಅಂದು ದೇಶ ವಿಭಜನೆ ಮಾಡಿದ್ದು, ಅದರ ನೋವು 70 ವರ್ಷವಾದರೂ ದೇಶದ ಜನರು ಅನುಭವಿಸುತ್ತಿದ್ದಾರೆ. ಅಂದು ದೇಶದ ಮೊದಲ ಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಆಗಿದ್ದರೆ ನಮ್ಮ ಪೂರ್ಣ ಕಾಶ್ಮೀರ ನಮಲ್ಲಿಯೇ ಇರುತ್ತಿತ್ತು. ಕಾಂಗ್ರೆಸ್ ಸರ್ಕಾರದಿಂದ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರಿಗೆ ಅನ್ಯಾಯವಾಗಿದೆ. ನಿನ್ನೆ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಶತ್ರುತ್ವ ಆ ಮಟ್ಟಿಗೆ ಮಾಡಿ, ಅದು ಎಂದಾದರೂ ಒಂದು ದಿನ ಸ್ನೇಹಕ್ಕೆ ತಿರುಗಬೇಕು ಎಂದು ಬಶೀರ್ ಭದ್ರಿ ಅವರ ಕವಿತೆ ಓದಿದ್ದರು. ಈ ಸಾಲುಗಳನ್ನು ಖರ್ಗೆ ತಮ್ಮದೇ ಸರ್ಕಾರವಿರುವ ಮುಖ್ಯಮಂತ್ರಿಗಳಿಗೆ ಹೇಳಿದಂತಿದೆ. ಈ ಶಾಯರಿಯನ್ನು ಕರ್ನಾಟಕದ ಸಿಎಂ ಕೇಳಲೇ ಬೇಕು. ಈ ಶಾಯರಿಯನ್ನು ಖರ್ಗೆಯವರು ಓದಿದ ಸ್ವಲ್ಪ ಹಿಂದಿನಿಂದ ಓದಬೇಕಿತ್ತು ಎಂದು ಹೇಳಿ ಟಾಂಗ್ ಕೊಟ್ಟರು.

ಸಿಎಂ ಸಿದ್ದರಾಮಯ್ಯ ಅವರು ಶಾಂತಿಯ ಸಂದೇಶ ಸಾರುವ ಬದಲು ಶತ್ರುತ್ವದ ಸಂದೇಶ ಸಾರುತ್ತಿದ್ದಾರೆ. ಮುಂದಿನ ಕರ್ನಾಟಕ ಚುನಾವಣೆ ಬಳಿಕ ನೀವು ಲೋಕಸಭೆಯಲ್ಲಿ ಇರುತ್ತೀರೋ ಇಲ್ಲವೋ ಗೊತ್ತಿಲ್ಲ. ನಮಗೆ ಸಲಹೆ ನೀಡುವ ಬದಲು ನಿಮ್ಮದೇ ಸರ್ಕಾರವಿರುವ ಸಿಎಂಗೆ ಬುದ್ಧಿ ಮಾತುಗಳನ್ನು ಹೇಳಿ ಅಂತಾ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಇದುವರೆಗೂ ಹೇಳದ ಮಾತನ್ನು ನಾನಿಂದು ಹೇಳುತ್ತಿದ್ದೇನೆ. ಕಲಬುರಗಿ – ಬೀದರ್ ರೈಲ್ವೇ ಯೋಜನೆಗಳಿಗೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಚಾಲನೆ ನೀಡಿತ್ತು. ಎನ್‍ಡಿಎ ಆಡಳಿತದ ಬಳಿಕ ಬಂದ ಯುಪಿಎ ಸರ್ಕಾರ ರೈಲ್ವೇ ಯೋಜನೆಯನ್ನು ಪೂರ್ಣ ಮಾಡಲು ಮನಸ್ಸು ಮಾಡಲಿಲ್ಲ. ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ಸರ್ಕಾರ ಬಂದಾಗ ಕೇಂದ್ರದಿಂದ ಅನುದಾನ ಪಡೆದು ಕಾಮಗಾರಿಯನ್ನು ಆರಂಭಿಸಿದರು. 110 ಕಿಮೀ. ಉದ್ದದ ಕಾಮಗಾರಿಯಲ್ಲಿ ಯುಪಿಎ ಸರ್ಕಾರ ಕೇವಲ 37 ಕಿ.ಮೀ. ರೈಲ್ವೇ ಕಾಮಗಾರಿ ಪೂರ್ಣ ಮಾಡಿದೆ ಎಂದು ಹೇಳಿ ಖರ್ಗೆಗೆ ತಿರುಗೇಟು ನೀಡಿದ್ದರು.

ನಮ್ಮಲ್ಲಿ ಭೇದ ಭಾವವಿಲ್ಲ: ಮಲ್ಲಿಕಾರ್ಜುನ್ ಖರ್ಗೆ ತಾವೇ ರೈಲ್ವೇ ಮಂತ್ರಿಯಾಗಿದ್ದರೂ, ತಮ್ಮ ಸ್ವಕ್ಷೇತ್ರದ ಅಭಿವೃದ್ಧಿಗೆ ಮುಂದಾಗಲಿಲ್ಲ. 2014ರಲ್ಲಿ ಕೇಂದ್ರದಲ್ಲಿ ಎನ್‍ಡಿಎ ಸರ್ಕಾರ ಬಂದ ಬಳಿಕ ಕಲಬುರಗಿ ಮತ್ತು ಬೀದರ್ ರೈಲ್ವೇ ಯೋಜನೆಯನ್ನು ಕೈಗೆತ್ತಿಕೊಂಡು ಪೂರ್ಣ ಮಾಡಿದ್ದೇವೆ. ನಾವು ಎಲ್ಲಿಯೂ ಕಲಬುರಗಿ ಮತ್ತು ಬೀದರ್ ನಮ್ಮ ವಿರೋಧ ಪಕ್ಷದ ನಾಯಕರ ಕ್ಷೇತ್ರ ಎಂದು ಭೇದ ಭಾವ ಮಾಡಿಲ್ಲ. ಕಲಬುರಗಿ ಮತ್ತು ಬೀದರ್ ವಿರೋಧ ಪಕ್ಷದ ನಾಯಕರ ಕ್ಷೇತ್ರವಾದ್ರೂ, ದೇಶ ನಮ್ಮದು ಅಂತಾ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. 2017 ಡಿಸೆಂಬರ್ ನಲ್ಲಿ ಬೀದರ್ ರೈಲ್ವೆ ಯೋಜನೆಯನ್ನು ಉದ್ಘಾಟನೆ ಮಾಡಿದ ಖುಷಿ ನನಗಿದೆ ಎಂದು ಹೇಳಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *