ತುಂಗಭದ್ರಾ ನೀರು ಸಿಗುತ್ತಿಲ್ಲ – ಕಾಂಗ್ರೆಸ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Public TV
1 Min Read

ರಾಯಚೂರು: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಈಗ ನೀರಿನ ರಾಜಕಾರಣ ಆರಂಭವಾಗಿದ್ದು, ತುಂಗಭದ್ರಾ ಎಡದಂಡೆ ನಾಲೆಗೆ ಸರಿಯಾಗಿ ನೀರು ದೊರೆಯುತ್ತಿಲ್ಲ ಎಂದು ಆರೋಪಿಸಿ ರಾಯಚೂರಿನ ಸಿಂಧನೂರಿನಲ್ಲಿ ಕಾಂಗ್ರೆಸ್ ಬೃಹತ್ ಹೋರಾಟ ಆರಂಭಿಸಿದೆ.

ಕಾಲುವೆ ಕೆಳಭಾಗದ ರೈತರಿಗೆ ನೀರು ಸಿಗುತ್ತಿಲ್ಲ, ಅವರಿಗೆ ಸೂಕ್ತ ರೀತಿಯಲ್ಲಿ ನೀರು ಒದಗಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಗಮನ ಸೆಳೆಯಲು ಹೋರಾಟ ನಡಸಲಾಗುತ್ತಿದೆ. ಇಂದಿನಿಂದ ಏಳು ದಿನಗಳ ಕಾಲ ಹೋರಾಟ ಹಮ್ಮಿಕೊಂಡಿದ್ದು, ಇಂದು ನೂರಾರು ರೈತರು ಎತ್ತಿನ ಬಂಡಿಗಳೊಂದಿಗೆ ಸಿಂಧನೂರಿನಲ್ಲಿ ಮೆರವಣಿಗೆ ನಡೆಸಿದರು. ಕೊನೆಯ ದಿನ ಕೊಪ್ಪಳದ ಮುನಿರಾಬಾದ್ ನಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಕಾಂಗ್ರೆಸ್ ಎಚ್ಚರಿಸಿದೆ.

ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಹಾಗೂ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ಏಳು ದಿನಗಳ ಕಾಲ ನಿರಂತರ ಹೋರಾಟ ನಡೆಯಲಿದೆ. ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಸಮಸ್ಯೆ, ಹೂಳಿಗೆ ಪರ್ಯಾಯವಾಗಿ ನವಲಿ ಜಲಾಶಯ ನಿರ್ಮಾಣ ವಿಳಂಬ, ತುಂಗಭದ್ರಾ ಮಂಡಳಿಗೆ ಕರ್ನಾಟಕ, ಆಂಧ್ರ ಹಾಗು ತೆಲಂಗಾಣ ಹೊರತುಪಡಿಸಿ ಅಧಿಕಾರಿ ನೇಮಿಸಬೇಕು, ನಾಲೆಯ ಅಭಿವೃದ್ಧಿಗೆ ಸರ್ಕಾರಗಳು ಸರಿಯಾದ ಅನುದಾನ ನೀಡುತ್ತಿಲ್ಲ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಿಂಧನೂರು, ಗಂಗಾವತಿ, ಮಾನ್ವಿ ಸೇರಿದಂತೆ ಹಲವು ಕಡೆಯ ರೈತರು ಭಾಗಿಯಾಗಿದ್ದಾರೆ. ನೂರಾರು ಎತ್ತಿನ ಬಂಡಿಯೊಂದಿಗೆ ನಗರದ ಹಳೆ ಬಜಾರ್ ನಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *