ದಲಿತ ಸಂಸದರನ್ನು ನಿರ್ಬಂಧ ಮಾಡಿದ ಕ್ರಮ ಸರಿಯಲ್ಲ: ಸಿದ್ದಲಿಂಗ ಸ್ವಾಮೀಜಿ

Public TV
1 Min Read

ತುಮಕೂರು: ಸಂಸದ ನಾರಾಯಣಸ್ವಾಮಿ ಅವರನ್ನು ಗೊಲ್ಲರಹಟ್ಟಿಗೆ ನಿರ್ಬಂಧ ಮಾಡಿದ ಕ್ರಮ ಸರಿಯಲ್ಲ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ದಲಿತ ಸಂಸದರನ್ನು ಗೊಲ್ಲರಹಟ್ಟಿಗೆ ನಿಷೇಧ ಮಾಡಿದ್ದು, ಶೋಚನೀಯ ಹಾಗೂ ದುಃಖನೀಯ ಸಂಗತಿ ಎಂದು ಹೇಳಿದ್ದಾರೆ. ಇಂತಹ ಆಧುನಿಕ ಕಾಲದಲ್ಲೂ ಇಂತಹ ಅನಿಷ್ಟ ಪದ್ಧತಿ ಜೀವಂತವಾಗಿ ಇರುವುದು ಖಂಡನೀಯ. ಇದನ್ನು ಹೋಗಲಾಡಿಸುವ ಚಿಂತನೆ ಮಾಡಬೇಕಿದೆ ಎಂದರು.

ಗಾಂಧಿಜೀಯ ಕನಸಿನ ಭಾರತ ಹಾಗೂ ಬಸವಣ್ಣ ಅವರ ಸಮಾಜದ ಆದರ್ಶ ನಮ್ಮಲ್ಲಿರಬೇಕು. ಒಬ್ಬ ಸಂಸದರಿಗೆ ಈ ಸ್ಥಿತಿ ಬಂದರೆ ಜನ ಸಾಮಾನ್ಯರ ಸ್ಥಿತಿ ಹೇಗಿರಬೇಡ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಘಟನೆ ವೇಳೆ ಸಂಸದರು ನಡೆದುಕೊಂಡ ರೀತಿ ಉತ್ತಮ. ನಾರಾಯಸ್ವಾಮಿ ಅವರ ಹೃದಯ ಶ್ರೀಮಂತಿಕೆ ಮೆಚ್ಚುವಂತದ್ದು, ಮುಂದಿನ ದಿನಗಳಲ್ಲಿ ಗೊಲ್ಲರಹಟ್ಟಿಯ ಜನರ ಮನಪರಿವರ್ತನೆಗೆ, ಅಭಿವೃದ್ಧಿಗೆ ಪಣತೊಡುತ್ತೇನೆ ಅಂದ ನಾರಾಯಣಸ್ವಾಮಿ ಅವರ ಕಾಳಜಿ ಮೆಚ್ಚುವಂತಹದ್ದು ಎಂದು ಶ್ಲಾಘಿಸಿದ್ದಾರೆ. ಇದನ್ನು ಓದಿ: ದಲಿತ ಸಂಸದರಿಗೆ ಗ್ರಾಮಕ್ಕೆ ಬರದಂತೆ ತಡೆದ ಗ್ರಾಮಸ್ಥರು

ಮಠ-ಮಾನ್ಯಗಳು ಹಾಗೂ ಸಂಘ ಸಂಸ್ಥೆಗಳು ಕೂಡ ಮುಂದೆ ಬಂದು ಈ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ. ಇದೇ ವೇಳೆ ಯಾವುದೇ ನಾಯಕರು ಆರೋಪದ ಮೇಲೆ ಬಂಧನವಾದಾಗ ಆಯಾ ಸಮುದಾಯಗಳ ಪರ ನಿಂತು ಪ್ರತಿಭಟನೆ ನಡೆಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ದೇಶದ ಪ್ರತಿಯೊಬ್ಬ ಪ್ರಜೆನೂ ರಾಷ್ಟ್ರ ಧ್ವಜ, ರಾಷ್ಟ್ರಗೀತೆ ಹಾಗೂ ಸಂವಿಧಾನವನ್ನು ಗೌರವಿಸಬೇಕು. ಕಾನೂನು ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಒಂದು ಕಾನೂನು ಇಲ್ಲ. ಎಲ್ಲರೂ ಕಾನೂನಿಗೆ ತಲೆ ಬಾಗಬೇಕು ಎಂದು ಪ್ರತಿಕ್ರಿಯಿಸಿದರು.

Share This Article
Leave a Comment

Leave a Reply

Your email address will not be published. Required fields are marked *