ಜಲ್ಲಿ ತುಂಬಿದ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ- ಕಾರಿನಲ್ಲಿದ್ದ ಐವರು ಸಾವು

Public TV
2 Min Read

– ನಿಂತಿದ್ದ ಲಾರಿಗೆ ಗುದ್ದಿದ ಮತ್ತೊಂದು ಲಾರಿ
– ಸ್ಥಳದಲ್ಲೇ ಎರಡೂ ಲಾರಿ ಚಾಲಕರು ಸಾವು
– ಬೈಕ್ ಡಿಕ್ಕಿಗೆ ಮಾರುದ್ದ ಹಾರಿ ಬಿದ್ದ ಮಹಿಳೆ

ತುಮಕೂರು: ಜಲ್ಲಿ ತುಂಬಿದ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕುಣಿಗಲ್ ತಾಲೂಕಿನ ಹೊಸಳ್ಳಿ ಬಳಿ ನಡೆದಿದೆ.

ಅಮೃತರೂ ಹೋಬಳಿಯ ದೊಡ್ಡಕಲ್ಲಳ್ಳಿ ಗ್ರಾಮದ ಕಿರಣ್ (24), ರಾಜಣ್ಣ (50), ಮೋಹನ್ (22), ರಂಗಸ್ವಾಮಿ (58) ಹಾಗೂ ಮಧು (24) ಮೃತರು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಯೊಬ್ಬರನ್ನು ಭೇಟಿಯಾಗಿ ಮರಳುತ್ತಿದ್ದಾಗ ಘಟನೆ ನಡೆದಿದೆ.

ರಾಜಣ್ಣ, ರಂಗಸ್ವಾಮಿ ಸೇರಿದಂತೆ ಐವರು ನೆಲಮಂಗಲ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಯನ್ನು ಭೇಟಿಯಾಗಲು ಸ್ವಿಫ್ಟ್ ಕಾರಿನಲ್ಲಿ ಬೆಳಗ್ಗೆ ಹೋಗಿದ್ದರು. ಅಲ್ಲಿಂದ ವಾಪಸ್ ಆಗುವಾಗ ಗ್ರಾಮದ ಸಮೀಪದಲ್ಲಿ ಚಾಲಕನ ನಿಯಂತ್ರಣದ ತಪ್ಪಿದ ಕಾರು ಟ್ರ್ಯಾಕ್ಟರ್‌ಗೆ ಟಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ರಂಗಸ್ವಾಮಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೂಡ ಸಾವನ್ನಪ್ಪಿದ್ದಾರೆ.

ಲಾರಿ ಅಪಘಾತ:
ನಿಂತಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ಶಿರಾ ತಾಲೂಕಿನ ದೊಡ್ಡ ಆಲದ ಮರದ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಚಲಿಸುತ್ತಿದ್ದ ಲಾರಿ ಕೆಟ್ಟು ದೊಡ್ಡ ಆಲದ ಮರದ ಬಳಿ ನಿಂತಿತ್ತು. ಇದನ್ನು ಗಮನಿಸದ ಮತ್ತೊಂದು ಲಾರಿ ಚಾಲಕ ವೇಗವಾಗಿ ಬಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಎರಡೂ ಲಾರಿಗಳ ಚಾಲಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿನ ಪ್ರಕರಣ ದಾಖಲಾಗಿದೆ.

ಬೈಕ್ ಡಿಕ್ಕಿ:
ತುಮಕೂರು ನಗರದ ಎಸ್.ಐ.ಟಿ ಮುಖ್ಯರಸ್ತೆಯಲ್ಲಿ ಭೀಕರ ಅಪಘಾತವೊಂದು ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ಗಾಯಗೊಂಡ ಮಹಿಳೆ ಲಕ್ಷ್ಮಮ್ಮ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಕ್ಷ್ಮಮ್ಮ ಇಂದು ತುಮಕೂರು ನಗರದ ಎಸ್.ಐ.ಟಿ ಮುಖ್ಯರಸ್ತೆಯನ್ನು ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬೈಕ್‍ನಲ್ಲಿ ಬಂದ ಕಾಲೇಜು ಹುಡುಗರು ಲಕ್ಷ್ಮಮ್ಮ ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ಬೈಕ್ ಗುದ್ದಿದ ರಭಸಕ್ಕೆ ಲಕ್ಷ್ಮಮ್ಮ ಮಾರುದ್ದ ಹಾರಿ ಬಿದ್ದಿದ್ದಾರೆ. ಅದೃಷ್ಟವಶಾತ್ ಮಹಿಳೆ ಹಾಗೂ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದೃಶ್ಯವು ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *