ತುಮಕೂರಿಗೆ ಹೇಮಾವತಿ ನೀರು ಹರಿಸಲು ಹಸ್ತಕ್ಷೇಪ – ದೇವೇಗೌಡ್ರ ಕುಟುಂಬದ ವಿರುದ್ಧ ಜನ ಆರೋಪ

Public TV
1 Min Read

– ನೀರು ಬಿಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ತುಮಕೂರು: ಜಿಲ್ಲೆಗೆ ಹೇಮಾವತಿಯಿಂದ ಬರಬೇಕಾಗಿದ್ದ ನೀರು ಸಂಪೂರ್ಣವಾಗಿ ಬರುತ್ತಿಲ್ಲ. ಹಾಗಾಗಿ ಜಿಲ್ಲೆಯ ಕೆರೆ ಕಟ್ಟೆಗಳು ಖಾಲಿ ಖಾಲಿಯಾಗಿ ಕಾಣ್ತಿದೆ. ಅದರಲ್ಲೂ ತಿಪಟೂರು ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಜನರ ನೀರಿನ ಬವಣೆಗೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವೇ ಕಾರಣ ಎಂದು ಜನ ದೂರುತ್ತಿದ್ದಾರೆ.

ಹೌದು. ತುಮಕೂರು ಜಿಲ್ಲೆಯಲ್ಲಿ ಮತ್ತೆ ನೀರಿನ ಬವಣೆ ಎದುರಾಗಿದೆ. ತಿಪಟೂರು, ಗುಬ್ಬಿ, ಶಿರಾ ಸೇರಿದಂತೆ ಬಹುತೇಕ ತಾಲೂಕಿನ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಅನ್ನದಾತರು ಕಂಗಾಲಾಗಿದ್ದಾರೆ. ಪ್ರತಿವರ್ಷ ಹೇಮಾವತಿಯಿಂದ ತುಮಕೂರು ಜಿಲ್ಲೆಗೆ 24.5 ಟಿ.ಎಂ.ಸಿ.ನೀರು ಬಿಡಬೇಕು. ಆದ್ರೆ 4 ರಿಂದ 5 ಟಿ.ಎಂ.ಸಿ. ನೀರು ಮಾತ್ರ ಹರಿಸಿ ಸುಮ್ಮನಾಗುತ್ತಿದ್ದಾರೆ.

ಅಲ್ಪ ಪ್ರಮಾಣದ ನೀರಿನಿಂದ ಜಿಲ್ಲೆಯ ಯಾವ ಕೆರೆಯೂ ತುಂಬುತ್ತಿಲ್ಲ. ಕುಡಿಯೋದಕ್ಕೆ ಹಾಗೂ ಕೃಷಿಗೆ ನೀರಿಲ್ಲದೆ ರೈತರು ಸಂಕಷ್ಟಪಡುವಂತಾಗಿದೆ. ಇದಕ್ಕೆಲ್ಲ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವೇ ಕಾರಣವೆಂದು ಜನರು ದೂರುತ್ತಿದ್ದಾರೆ. ಸಚಿವ ರೇವಣ್ಣ ನೀರು ಬಿಡದಂತೆ ಹಸ್ತಕ್ಷೇಪ ಮಾಡುತ್ತಿದ್ದು, ನೆಪಮಾತ್ರಕ್ಕೆ ನೀರು ಬಿಟ್ಟು ಕೈತೊಳೆದುಕೊಳ್ಳುತ್ತಿದ್ದಾರೆಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೇಮಾವತಿ ನೀರು ಬಾರದೇ ತಿಪಟೂರಿನ ಹಲವು ಏತನೀರಾವರಿ ಘಟಕಗಳು ಸದ್ಯ ಪಾಳು ಬಿದ್ದಿವೆ. ತಿಪಟೂರು ತಾಲೂಕಿನ ಗೌಡನಕಟ್ಟೆ, ಗುರುಗದಹಳ್ಳಿಗಳಲ್ಲಿನ ಕೆರೆಗಳಲ್ಲಿ ನೀರಿಲ್ಲದ ಪರಿಣಾಮ ಸುಮಾರು 13 ಕೋಟಿ ರೂ ನಿರ್ಮಾಣವಾದ ನೀರು ಸರಬರಾಜು ಘಟಕಗಳು ಪಾಳು ಬಿದ್ದಿವೆ. ಪರಿಣಾಮವಾಗಿ ಈ ಭಾಗದ ಜನರು ಕುಡಿಯಲು, ಕೃಷಿ ಚಟುವಟಿಕೆಗೆ ನೀರಿಲ್ಲದೆ ಪರಿತಪಿಸುತ್ತಿದ್ದಾರೆ ಅಂತ ಗೌಡನಕಟ್ಟೆ ನಿವಾಸಿ ರಾಜಶೇಖರಯ್ಯ ತಿಪಟೂರು ಹೇಳಿದ್ದಾರೆ.

ಹೇಮಾವತಿ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ತುಮಕೂರು ಜಿಲ್ಲೆಗೆ ಹರಿಸುತ್ತಿಲ್ಲ. ಈ ಬಾರಿಯೂ ನೀರು ಬಿಡದಿದ್ದರೆ ದೇವೇಗೌಡರ ಕುಟುಂಬದ ವಿರುದ್ಧ ಉಗ್ರ ಹೋರಾಟ ಮಾಡೋ ಎಚ್ಚರಿಕೆಯನ್ನು ಜಿಲ್ಲೆಯ ಜನತೆ ಕೊಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *