ಮತ್ತೆ ಪ್ರಧಾನಿ ಆಗಬೇಕು ಎಂದು ಕನಸು ಕಂಡಿದ್ದ ದೇವೇಗೌಡರ ಆಸೆಗೆ ತಣ್ಣೀರು ಬಿತ್ತು – ಜಿ.ಎಸ್.ಬಸವರಾಜು

Public TV
1 Min Read

ತುಮಕೂರು: ಇವತ್ತಿನ ಎಕ್ಸಿಟ್ ಪೋಲ್ ಸಮೀಕ್ಷೆ ನೋಡಿ ಮತ್ತೆ ಪ್ರಧಾನಿ ಆಗಬೇಕು ಎಂದು ಕನಸು ಕಂಡಿದ್ದ ದೇವೇಗೌಡರ ಆಸೆಗೆ ತಣ್ಣೀರು ಬಿದ್ದಿದೆ ಎಂದು ತುಮಕೂರಿನ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರು ವ್ಯಂಗ್ಯವಾಡಿದ್ದಾರೆ.

ಇಂದಿಗೆ ಏಳು ಹಂತದಲ್ಲಿ ನಡೆದ ಲೋಕಸಭಾ ಚುನಾವಣೆ ಮುಗಿದಿದೆ. ಇದರ ಬೆನ್ನಲ್ಲೇ ಹಲವಾರು ಸಮೀಕ್ಷೆಗಳ ಪ್ರಕಾರ ಬಿಜೆಪಿ ಪಕ್ಷ ಮುಂಚೂಣಿಯಲ್ಲಿದ್ದು, ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿ.ಎಸ್.ಬಸವರಾಜು ಅವರು, ಮೋದಿ ಮತ್ತೇ ಪ್ರಧಾನಿ ಅನ್ನೋದನ್ನು ಸಮೀಕ್ಷೆ ಸಾಬೀತು ಮಾಡಿದೆ ಎಂದು ಹೇಳಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತುಮಕೂರಲ್ಲಿ ನಾವು ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ. ಎಕ್ಸಿಟ್ ಪೋಲ್‍ನಲ್ಲಿ ಮೋಸ ಇಲ್ಲ. ಇದು ಒಂದು ರೀತಿ ಶಾಸ್ತ್ರ ಹೇಳಿದಹಾಗೆ ನೂರಕ್ಕೆ 80% ಸತ್ಯ ಇರುತ್ತದೆ. ಚುನಾವಣೋತ್ತರ ಸಮೀಕ್ಷೆ ಯಿಂದ ದೇವೇಗೌಡರಿಗೆ ನಿದ್ದೆ ಬರುವುದಿಲ್ಲ. ಈ ಸಮೀಕ್ಷೆ ಬಂದು ಮತ್ತೆ ಪ್ರಧಾನಿಯಾಗುವ ಕನಸು ಕಂಡಿದ್ದ ದೇವೇಗೌಡರು ಅವರ ಆಸೆಗೆ ತಣ್ಣೀರು ಬಿದ್ದ ಹಾಗಾಗಿದೆ ಎಂದು ಹೇಳಿದರು.

ಅತ್ಯಂತ ಉತ್ತಮ ಪ್ರಜಾಪ್ರಭುತ್ವಕ್ಕಾಗಿ ಜನರು ಈ ತೀರ್ಪು ನೀಡಿದ್ದಾರೆ. ಯುವಕರು ಯುವತಿಯರು ಮತ್ತು ಪ್ರಜ್ಞಾವಂತರು ಬಿಜೆಪಿಗೆ ಮತಹಾಕಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಡೈವೋರ್ಸ್ ಪಡೆದ ಗಂಡ ಹೆಂಡತಿ ಇದ್ದ ಹಾಗೆ. ಅವರ ಕ್ಷೇತ್ರದಲ್ಲಿ ಇವರು, ಇವರ ಕ್ಷೇತ್ರದಲ್ಲಿ ಅವರು ಸರಿಯಾಗಿ ಕೆಲಸ ಮಾಡಿಲ್ಲ. ಮೈಸೂರಲ್ಲಿ ಜೆಡಿಎಸ್ ನವರು ಬಿಜೆಪಿಗೆ ಹಾಕಿದರೆ ತುಮಕೂರಲ್ಲಿ ಕಾಂಗ್ರೆಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆ. ಇದನ್ನು ನೋಡಿದರೆ ಡೈವೋರ್ಸ್ ಕೊಟ್ಟ ಗಂಡ, ಹೆಂಡತಿ ಮಗಳ ಮದುವೆಗೆ ಬಂದಹಾಗೆ ಬಂದು ಹೋಗಿದ್ದಾರೆ. ಒಬ್ಬರ ಮುಖ ಒಬ್ಬರು ನೋಡಿಲ್ಲ ಎಂದು ಮೈತ್ರಿ ನಾಯಕರನ್ನು ಲೇವಡಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *