ಶಶಿಕಲಾ ಆಪ್ತ ದಿನಕರನ್ ಕಾರಿನ ಮೇಲೆ ಪೆಟ್ರೋಲ್ ಬಾಂಬ್ ದಾಳಿ

Public TV
1 Min Read

ಚೆನ್ನೈ: ಮಾಜಿ ಎಐಎಂಡಿಕೆ ಮುಖಂಡ ಹಾಗೂ ಶಶಿಕಲಾ ಆಪ್ತರಾಗಿರುವ ಟಿಟಿವಿ ದಿನಕರನ್ ಮನೆಯ ಮುಂಭಾಗ ನಿಲ್ಲಿಸಿದ್ದ ಅವರ ಕಾರಿನ ಮೇಲೆ ಭಾನುವಾರ ಮಧ್ಯಾಹ್ನ ದುಷ್ಕರ್ಮಿಯೊಬ್ಬ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾನೆ.

ದುಷ್ಕರ್ಮಿಯೊಬ್ಬ ದಿನಕರನ್ ಕಾರಿನ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದು, ಈ ವೇಳೆ ದಿನಕರನ್ ಕಾರಿನಲ್ಲಿ ಇರಲಿಲ್ಲ. ಆದರೆ ದಾಳಿಯಲ್ಲಿ ದಿನಕರನ್ ಕಾರು ಚಾಲಕ ಹಾಗೂ ಫೋಟೋಗ್ರಾಫರ್ ಗಾಯಗೊಂಡಿದ್ದಾಗಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲದೇ ದಾಳಿಯಲ್ಲಿ ಕಾರು ಕೂಡ ಜಖಂ ಗೊಂಡಿದ್ದು, ಮುರಿದ ಗಾಜಿನ ತುಣುಕುಗಳು ರಸ್ತೆ ಮೇಲೆ ಚೆಲ್ಲಾಡಿದೆ.

ಸದ್ಯ ದಾಳಿಯ ಹಿಂದೆ ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಕಾರ್ಯಕರ್ತನೊಬ್ಬನ ಕೈವಾಡ ಇರುವ ಕುರಿತು ಆರೋಪ ಕೇಳಿಬಂದಿದೆ. ದಾಳಿಯಲ್ಲಿ ಸ್ವದೇಶಿ ನಿರ್ಮಿತ ಪೆಟ್ರೋಲ್ ಬಾಂಬ್ ಬಳಕೆ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ.

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸಾವಿನ ಬಳಿಕ ಉಂಟಾದ ಬೆಳವಣಿಗೆಯಲ್ಲಿ ಎಐಎಂಡಿಕೆ ಪಕ್ಷದಿಂದ ದಿನಕರನ್‍ರನ್ನು ಉಚ್ಚಾಟಿಸಲಾಗಿತ್ತು. ಬಳಿಕ ಡಿಸೆಂಬರ್ ನಲ್ಲಿ ನಡೆದ ಉಪಚುನಾವಣೆಯಲ್ಲಿ ಜಯಲಲಿತಾ ಅವರ ಕ್ಷೇತ್ರವಾಗಿದ್ದ ಆರ್.ಕೆ.ನಗರದಿಂದ ದಿನಕರನ್ ಸ್ಪರ್ಧಿಸಿ ಗೆಲುವು ಪಡೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *