ಮಠ ಬಿಡಲ್ಲ ಅಂತ ವಚನಾನಂದ ಶ್ರೀ ಪಟ್ಟು – ಬಿಡದಿದ್ರೆ ಎಳೆದು ಹೊರಗೆ ಹಾಕ್ತೀವಿ ಎಂದ ಟ್ರಸ್ಟಿಗಳು

2 Min Read

ದಾವಣಗೆರೆ: ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗಳ ಬೀದಿ ರಂಪಾಟವಾಗಿದೆ. ಟ್ರಸ್ಟಿಗಳಿಂದ ಉಚ್ಚಾಟನೆಗೊಳಗಾದ ವಚನಾನಂದ ಶ್ರೀ ಮಠ ಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದರ ನಡುವೆ ಮಠ ತೊರೆಯದಿದ್ದರೆ ಎಳೆದು ಮಠದಿಂದ ಹೊರಗೆ ಹಾಕ್ತೀವಿ ಎಂದು ಟ್ರಸ್ಟಿಗಳು ಎಚ್ಚರಿಕೆ ನೀಡಿದ್ದಾರೆ.

ಸ್ವಾಮೀಜಿ ಮಠದಲ್ಲಿ ಆಚಾರ ವಿಚಾರಗಳಲ್ಲಿ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಅನಾಥ ಮಕ್ಕಳನ್ನು ಮಸಾಜ್ ಮಾಡಿಸಿಕೊಳ್ಳಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಸಾಲು ಸಾಲು ಅರೋಪಗಳನ್ನು ಸ್ವಾಮೀಜಿ ಮೇಲೆ ಟ್ರಸ್ಟಿಗಳು ಮಾಡಿ, ಉಚ್ಚಾಟಿಸಿದ್ದಾರೆ. ಆದರೆ ವಚನಾನಂದ ಸ್ವಾಮೀಜಿ ಹಾಗೂ ಮಠದ ಭಕ್ತರು ಯಾವುದೇ ಕಾರಣಕ್ಕೂ ಶ್ರೀಗಳು ಮಠವನ್ನು ಬಿಟ್ಟು ಹೋಗುವುದಿಲ್ಲ ಎಂದು ವಾದಿಸಿದ್ದಾರೆ. ಇದನ್ನೂ ಓದಿ: ಪೀಠಕ್ಕೆ ಬರುವ ಗುರುಕಾಣಿಕೆ ಶ್ವಾಸಕೇಂದ್ರಕ್ಕೆ ವರ್ಗಾವಣೆ – ವಂಚನಾನಂದ ಶ್ರೀಗಳ ಉಚ್ಚಾಟನೆ ಟ್ರಸ್ಟ್‌ ಕೊಟ್ಟ 10 ಕಾರಣಗಳೇನು?

ವಚನಾನಂದ ಸ್ವಾಮೀಜಿ ಒಬ್ಬ ಗೋಮುಖ ವ್ಯಾಘ್ರ ಅಂತಹ ವ್ಯಕ್ತಿಯಿಂದ ಇಡೀ ಸಮಾಜಕ್ಕೆ ಅಪಮಾನವಾಗಿದೆ ಎಂದು ಟ್ರಸ್ಟಿಗಳು ಹಾಗೂ ಪಂಚಮಸಾಲಿ ಯುವಘಟಕ ಆಕ್ರೋಶ ಹೊರಹಾಕಿದೆ. ಕೂಡಲೇ ಗೌರವಯುತವಾಗಿ ಪೀಠವನ್ನು ಬಿಟ್ಟು ಹೋಗಬೇಕು ಇಲ್ಲವಾದ್ರೆ ಕಾನೂನು ಹೋರಾಟ ಮಾಡುತ್ತೇವೆ. ಇದು ತಾರಕಕ್ಕೆ ಏರುವ ಮುನ್ನವೇ ಪೀಠವನ್ನು ತ್ಯಜಿಸಿ ಎಂದು ಪಂಚಮಸಾಲಿ ಯುವ ಘಟಕ ಅಗ್ರಹಿಸಿದೆ.

ಟ್ರಸ್ಟಿಗಳ ಮೇಲೆ ಲೆಕ್ಕ ಪತ್ರ ಕೊಡಿ ಎಂದು ಭ್ರಷ್ಟಾಚಾರದ ಅರೋಪ ಮಾಡುತ್ತಿದ್ದಾರೆ. ಪ್ರತಿ ತಿಂಗಳು ಲೆಕ್ಕಪತ್ರ ನೀಡುತ್ತಿದ್ದು, ಆಡಿಟಿಂಗ್ ಕೂಡ ಮಾಡಿಸಲಾಗಿದೆ ಎಂದು ಟ್ರಸ್ಟಿಗಳು ಸಮರ್ಥನೆ ಮಾಡಿಕೊಂಡಿದ್ದಾರೆ. ಇದರ ನಡುವೆ ವಚನಾನಂದ ಶ್ರೀಗಳ ಉಚ್ಚಾಟನೆಗೆ ಮುಂದಾಗಿರುವ ಟ್ರಸ್ಟಿ ಚಂದ್ರಶೇಖರ್ ಪೂಜಾರ್, ಈಗ ಶ್ರೀಗಳ ಪರವಾಗಿ ನಿಂತಿರುವ ಮಾಜಿ ಶಾಸಕ ಅರುಣಕುಮಾರ್ ಪೂಜಾರ್ ಅವರ ಮೇಲೆ ಮುಗಿಬಿದ್ದಿದ್ದಾರೆ. ಮಠದ ಖರ್ಚಿಗೆ ಒಂದೂವರೆ ಕೋಟಿ ರೂ. ಹಣ ಕೊಟ್ಟಿದ್ದೇನೆ ಎಂದು ಹೇಳುವ ಅರುಣಕುಮಾರ್ ಪೂಜಾರ್‌ಗೆ ಸ್ಕಾರ್ಪಿಯೋ ಕಾರು ಕೊಡಿಸಿದ್ದೇ ನಾನು ಎಂದು ಚಂದ್ರಶೇಖರ್ ಹೊಸ ಬಾಂಬ್ ಸಿಡಿಸಿದ್ದಾರೆ. ಒಟ್ಟಿನಲ್ಲಿ ಮಠದ ಗಲಾಟೆ ಯಾವ ಹಂತಕ್ಕೆ ತಲುಪಲಿದೆ, ಯಾವಾಗ ಸರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಹಿಂದೂಗಳು ಅಂತ ಹೇಳಬಾರದು, ಪಂಚಮಸಾಲಿಗಳು ಪ್ರಬಲರಾಗುತ್ತಿರುವುದ್ದಕ್ಕೆ ಟಾರ್ಗೆಟ್‌: ವಚನಾನಂದ ಸ್ವಾಮೀಜಿ

Share This Article