ಕರಾವಳಿಯಲ್ಲಿ ಚರ್ಚ್‍ಗೆ ನುಗ್ಗಿ ದಾಂಧಲೆ- ಭಗವಾಧ್ವಜ ಹಾರಿಸಿ ಹನುಮಂತನ ಪೂಜೆ!

By
1 Min Read

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆ ಅಂದ್ರೆನೇ ಕೋಮುಸೂಕ್ಷ್ಮ ಪ್ರದೇಶ. ಇಲ್ಲಿ ಕೋಮುಗಲಭೆ, ವಿವಾದಗಳು ಮಾಮೂಲಿ. ಕೆಲ ಕಿಡಿಗೇಡಗಳು ಶಾಂತಿ ಕದಡೋ ಸಲುವಾಗಿಯೇ ಕಾದು ಕುಳಿತಿರ್ತಾರೆ. ಇಷ್ಟು ದಿನ ಮಂದಿರ-ಮಸೀದಿಗಳಿಗೆ ಸೀಮಿತವಾಗಿದ್ದ ಗಲಾಟೆ ಇದೀಗ ಚರ್ಚ್‍ನಲ್ಲೂ ಶುರುವಾಗಿದೆ. ಚರ್ಚ್‍ನ ಬಾಗಿಲು ಒಡೆದೋಗಿದೆ. ಶಿಲುಬೆ ಜಾಗದಲ್ಲಿ ಭಗವಾಧ್ವಜ ಹಾರಾಡ್ತಿದೆ. ಒಳಗೋದ್ರೆ ಟೇಬಲ್ ಮೇಲೆ ಹನುಮಂತನ ಫೋಟೋ ಇದೆ. ಮುಂದೆ ದೀಪ ಬೆಳಗ್ತಿದೆ. ಇದು ಕಿಡಿಗೇಡಿಗಳ ಕೃತ್ಯವೋ..? ಅಕ್ರಮ ಒತ್ತುವರಿ ತೆರವೋ ಗೊತ್ತಿಲ್ಲ. ಆದ್ರೆ ವಿವಾದದ ಕಿಡಿ ಮಾತ್ರ ಹೊತ್ತಿ ಉರೀತಿದೆ.

ಹೌದು. ದಕ್ಷಿಣಕನ್ನಡ ಜಿಲ್ಲೆ ಕಡಬ ತಾಲೂಕಿನ ಪೇರಡ್ಕದಲ್ಲಿರೋ ಇಮ್ಯಾನುವೆಲ್ ಅಸೆಂಬ್ಲಿ ಆಫ್ ಗಾಡ್ ಚರ್ಚ್‍ನ ಅವಸ್ಥೆಯಿದು. ಇಲ್ಲಿ ದುರಸ್ಥಿ ಕಾಮಗಾರಿ ನಡೀತಿತ್ತು. ಆದರೆ ರಾತ್ರೋರಾತ್ರಿ ಚರ್ಚ್‍ಗೆ ನುಗ್ಗಿದ ಕಿಡಿಗೇಡಿಗಳು ಶಿಲುಬೆ ಒಡೆದಾಕಿ ಅಲ್ಲಿ ಭಗವಾಧ್ವಜ ಹಾರಿಸಿದ್ದಾರೆ. ಕಬೋರ್ಡ್‍ನಲ್ಲಿದ್ದ ದಾಖಲೆಗಳನ್ನು ನಾಶ ಮಾಡಿ ಎಲೆಕ್ಟ್ರಾನಿಕ್ ಸಾಮಗ್ರಿ ಕಳವು ಮಾಡಿದ್ದಾರಂತೆ. ಈ ಬಗ್ಗೆ ಪಾಸ್ಟರ್ ಜೋಸ್ ವರ್ಗಿಸ್ ಕಡಬ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಎನ್‍ಕೌಂಟರ್‌ನಲ್ಲಿ ಮೂರು ಭಯೋತ್ಪಾದಕರ ಪೈಕಿ ಒಬ್ಬ ಬದುಕುಳಿದ

ದೂರುದಾರರ ಪ್ರಕಾರ, 30 ವರ್ಷಗಳಿಂದ ಕಟ್ಟಡದ ತೆರಿಗೆ ಕಟ್ಟುತ್ತಿದ್ದಾರಂತೆ. ಚರ್ಚ್ ಅಧಿಕೃತ ಅಂತ ದೂರಿನಲ್ಲೂ ಉಲ್ಲೇಖಿಸಿದ್ದಾರೆ. ವಿಷ್ಯ ಗೊತ್ತಾಗ್ತಿದ್ದಂತೆಯೇ ಹಿಂದೂ ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿದ್ರು. ಚರ್ಚ್ ಖಾಸಗಿ ವ್ಯಕ್ತಿಗೆ ಸೇರಿದ್ದು. ಮೊದಲು ಬಾಡಿಗೆಗೆ ಪಡೆದು ಆ ಬಳಿಕ ಕೃಷಿ ಭೂಮಿ ಮಾಡ್ಕೊಂಡಿದ್ದಾರೆ. ನಂತ್ರ ಸುತ್ತಲಿನ ಜಾಗವನ್ನೂ ಒತ್ತುವರಿ ಮಾಡ್ಕೊಂಡಿದ್ದಾರೆ. ಇದನ್ನು ತೆರವುಗೊಳಿಸದಿದ್ರೆ ಉಗ್ರ ಹೋರಾಟ ಮಾಡ್ತೀವಿ ಅಂತ ಎಚ್ಚರಿಕೆ ಕೊಟ್ರು.

ಒಟ್ಟಿನಲ್ಲಿ ದೂರು ದಾಖಲಿಸಿಕೊಂಡಿರೋ ಪೊಲೀಸರು ಸದ್ಯ ತನಿಖೆ ನಡೆಸ್ತಿದ್ದಾರೆ. ಜಾಗ ಯಾರದ್ದು..? ದಾಂಧಲೆ ನಡೆಸಿರೋರು ಯಾರು..? ಅನ್ನೋದು ತನಿಖೆಯ ಬಳಿಕವಷ್ಟೇ ಗೊತ್ತಾಗಲಿದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡೋರು ಯಾರೇ ಆಗಿದ್ರೂ ಅವರಿಗೆ ತಕ್ಕಶಿಕ್ಷೆ ಆಗಲೇಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *