ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರು ಸಾವು

Public TV
1 Min Read

ಮಂಗಳೂರು: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಸಿದ್ಧವನ ಬಳಿ ನಡೆದಿದೆ.

ಉಜಿರೆ ನಿನ್ನಿಕಲ್ಲು ನಿವಾಸಿ ವಿಘ್ನೇಶ್ (21) ಹಾಗೂ ಮಡಂತ್ಯಾರುನ ಕ್ಷಿತಿಜ್ ಜೈನ್ (24) ಮೃತ ದುರ್ದೈವಿಗಳು. ಈ ಘಟನೆಯಲ್ಲಿ ಸುಶಾಂತ್ ಮತ್ತು ಹರ್ಷಿತ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವಿಘ್ನೇಶ್ ಹಾಗೂ ಸ್ನೇಹಿತರಾದ ಕ್ಷಿತಿಜ್ ಜೈನ್, ಸುಶಾಂತ್ ಹಾಗೂ ಹರ್ಷಿತ್ ಧರ್ಮಸ್ಥಳದಿಂದ ಉಜಿರೆ ಕಡೆಗೆ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಸಿದ್ಧವನದ ಬಳಿ ಮರವೊಂದು ಕಾರಿನ ಹಿಂಭಾಗದ ಮೇಲೆ ಬಿದ್ದಿದೆ. ಪರಿಣಾಮ ಹಿಂದಿನ ಸೀಟ್‍ನಲ್ಲಿ ಕುಳಿತಿದ್ದ ವಿಘ್ನೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ವಿಘ್ನೇಶ್ ಪಕ್ಕದಲ್ಲಿ ಕುಳಿತಿದ್ದ ಕ್ಷಿತಿಜ್  ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆ ತಲುಪುತ್ತಿರುವಂತೆ ಆಂಬುಲೆನ್ಸ್ ನಲ್ಲಿ ಸಾವನ್ನಪ್ಪಿದ್ದಾರೆ.

ಅದೃಷ್ಟವಶಾತ್ ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಮುಂದೆ ಕುಳಿತಿದ್ದ ಸುಶಾಂತ್ ಹಾಗೂ ಹರ್ಷಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳುಗಳನ್ನು ಹಾಗೂ ಮೃತರನ್ನು ಆಸ್ಪತ್ರೆ ಸಾಗಿಸಲು ಸ್ಥಳೀಯರು, ಪ್ರಯಾಣಿಕರು ಸಹಕರಿಸಿ ಮಾನವೀಯತೆ ಮೆರೆದಿದ್ದಾರೆ. ಈ ಅವಘಡವು ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ್ದರಿಂದ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಉಜಿರೆ ಕಾಲೇಜು ಹಾಗೂ ನೀರ ಚಿಲುಮೆಯವರೆಗೂ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ ಬಳಿಕ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಲು ಸಾರ್ವಜನಿಕರು ಸಹಕರಿಸಿದರು.

Share This Article
Leave a Comment

Leave a Reply

Your email address will not be published. Required fields are marked *