ಭೀಕರ ರಸ್ತೆ ಅಪಘಾತಕ್ಕೆ ನಾಲ್ವರು ಟೆಕ್ಕಿಗಳು ಸ್ಥಳದಲ್ಲೇ ಸಾವು

Public TV
1 Min Read

ಥಾಣೆ: ಕಾರು ಮತ್ತು ಬಸ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ಕು ಮಂದಿ ಸಾಫ್ಟ್ ವೇರ್ ಉದ್ಯೋಗಿಗಳು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಮುಂಬೈ ಸಮೀಪದ ಭಿವಾಂಡಿಯಲ್ಲಿ ಬುಧವಾರ ಮುಂಜಾನೆ ನಡೆದಿದೆ.

ಸ್ನೇಹಿತನ ಹುಟ್ಟು ಹಬ್ಬದ ಸಂಭ್ರಮದ ಪಾರ್ಟಿಯನ್ನು ಮುಗಿಸಿಕೊಂಡು ಏಳು ಮಂದಿ ಎಂಜಿನಿಯರುಗಳು ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು, ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ನಾಲ್ವರು ಮೃತ ಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರನ್ನು ಡೊಂಬಿವಿಲಿ ನಿವಾಸಿ ವಿಕ್ರಾಂತ್ ಸಿಂಗ್, ಮೀರಾ ರಸ್ತೆಯ ನಿವಾಸಿಗಳಾದ ನಿರಾಜ್ ಪಂಚಾಲ್ ಮತ್ತು ಮೀಹಿರ್ ಉತೇಕರ್, ಬೊರಿವಿಲಿ ನಿವಾಸಿಗಳಾದ ನಿರಾವ್ ಮೆಹ್ತಾ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ವೈಬಾವ್ ಚೆಡ್ಡಾ, ರಮೇಶ್ ಪಾಟೀಲ್ ಮತ್ತು ಸಂತೋಷ್ ಮಿಶ್ರಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ನೇಹಿತರೆಲ್ಲರು ಸ್ಪೇಸ್.ಕಾಮ್ ಸಂಸ್ಥೆಯ ಉದ್ಯೋಗಿಗಳಾಗಿದ್ದರು. ಸೆಪ್ಟೆಂಬರ್ 12 ರಂದು ನಿರಾಜ್‍ನ ಹುಟ್ಟು ಹಬ್ಬದ ಪಾರ್ಟಿಯನ್ನು ಮಾಡಲು 10 ಜನರ ತಂಡವು ಸ್ನೇಹಿತ ಸಂಕೇತ್‍ನ ಡೊಂಬಿವಿಲಿಯಲ್ಲಿರುವ ಫ್ಲಾಟ್‍ಗೆ ಹೋಗಿದ್ದರು. ಪಾರ್ಟಿಯನ್ನು ಮುಗಿಸಿ ನಂತರ ಎಲ್ಲರು ಒಂದೇ ಕಾರಿನಲ್ಲಿ ಆಫಿಸ್‍ಗೆ ತೆರಳಲು ನಿರ್ಧರಿಸಿದ್ದರು ಎಂದು ಮೃತ ಪಟ್ಟವರ ಸ್ನೇಹಿತ ರೋಹಿತ್ ಷಾ ತಿಳಿಸಿದ್ದಾರೆ.

ಪಾರ್ಟಿ ಮುಗಿಸಿ ಮುಂಜಾನೆ 3 ಗಂಟೆಗೆ ಅಲ್ಲಿಂದ ನಾನು ಹೊರಟೆ, ಕಾರನ್ನು ಡ್ರೈವ್ ಮಾಡುತ್ತಿದ್ದ ವಿಕ್ರಾಂತ್ ಸಿಂಗ್ ಪಾರ್ಟಿಯಲ್ಲಿ ಭಾಗವಹಿಸಿರಲಿಲ್ಲ, ಉಳಿದವರನ್ನು ಆಫಿಸ್‍ಗೆ ಡ್ರಾಪ್ ಮಾಡಲು ತೆರಳಿದ್ದ ಎಂದು ಷಾ ವಿವರಿಸಿದರು.

ಕಾರ್ ಅನ್ನು ಡ್ರೈವ್ ಮಾಡುತ್ತಿದ್ದ ಸಿಂಗ್ ಬಸ್‍ಗೆ ಡಿಕ್ಕಿ ಹೊಡೆದ ನಂತರ ನಿಯಂತ್ರಣ ಕಳೆದುಕೊಂಡು ಈ ದುರ್ಘಟನೆ ಸಂಭವಿಸಿದೆ ಎಂದು ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *