ಕ್ಷುಲ್ಲಕ ಕಾರಣಕ್ಕೆ ಬಿಎಂಟಿಸಿ ಡ್ರೈವರ್ ಮೇಲೆ ಖಾಕಿ ರೌದ್ರಾವತಾರ

Public TV
1 Min Read

ಬೆಂಗಳೂರು: ನಗರದಲ್ಲಿ ಟ್ರಾಫಿಕ್ ಪೊಲೀಸರು ಹಾಗೂ ಬಿಎಂಟಿಸಿ ಡ್ರೈವರ್ ನಡುವಿನ ಜಟಾಪಟಿ ನಿಲ್ಲುವಂತೆ ಕಾಣುತ್ತಿಲ್ಲ. ಕಳೆದ ತಿಂಗಳು ಮಾರತಹಳ್ಳಿಯಲ್ಲಿ ಖಾಕಿ-ಬಿಎಂಟಿಸಿ ಡ್ರೈವರ್ ನಡುವೆ ಫೈಟ್ ನಡೆದಿತ್ತು, ಆ ಘಟನೆ ಮಾಸುವ ಮುನ್ನವೇ ಮತ್ತೆ ಮಾರತಹಳ್ಳಿಯಲ್ಲಿ ಅದೇ ರೀತಿಯ ಘಟನೆ ಪುನರಾವರ್ತನೆ ಆಗಿದೆ.

ಕ್ಷುಲ್ಲಕ ಕಾರಣಕ್ಕೆ ಬಿಎಂಟಿಸಿ ಡ್ರೈವರ್ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ ಮಾಡಿದ್ದಾರೆ. ನಡುರಸ್ತೆಯಲ್ಲೇ ಬಸ್ ನಿಲ್ಲಿಸಿ ಚಾಲಕನನ್ನು ಹೊರಗೆ ಎಳೆದು ಹಲ್ಲೆ ಮಾಡಿದ್ದಾರೆ. ಟ್ರಾಫಿಕ್ ಪೊಲೀಸ್ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಂಬದಿ ಸವಾರ ಹೆಲ್ಮೆಟ್ ಹಾಕದಿದ್ದಕ್ಕೆ ಕಾಲರ್ ಹಿಡಿದು ಎಳೆದಾಡಿದ ಟ್ರಾಫಿಕ್ ಪೊಲೀಸ್

ಯುವಕನೊಬ್ಬ ವೋಲ್ವೋ ಬಸ್ಸಿನಲ್ಲಿ ಸಂಚರಿಸುತ್ತಿದ್ದನು. ಈ ವೇಳೆ ಚಾಲಕ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ. ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಸ್ಸನ್ನು ನಡುರಸ್ತೆಯಲ್ಲಿ ನಿಲ್ಲಿಸಿ ಚಾಲಕನನ್ನು ಹೊರಗೆ ಎಳೆದು ತಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಪೊಲೀಸ್ ಅಧಿಕಾರಿಯ ವರ್ತನೆಯಿಂದ ಕೋಪಗೊಂಡ ಚಾಲಕ ಅವರ ಜೊತೆ ಮಾತಿನ ಚಕಮಕಿಗಿಳಿದಿದ್ದಾನೆ. ಈ ವೇಳೆ ಪೊಲೀಸ್ ಅಧಿಕಾರಿ ಚಾಲಕನ ಶರ್ಟ್ ಕಾಲರಿಗೆ ಕೈ ಹಾಕಿ ನಿಂದಿಸಲು ಶುರು ಮಾಡಿದ್ದಾರೆ. ಇಬ್ಬರ ಜಗಳ ಬಿಡಿಸಲು ಕಂಡೆಕ್ಟರ್ ಯತ್ನಿಸಿದಾಗ ಪೊಲೀಸ್ ಅಧಿಕಾರಿ ಅರೆಸ್ಟ್ ಮಾಡಲು ಮುಂದಾಗಿದ್ದಾರೆ.

ನಡುರಸ್ತೆಯಲ್ಲಿ ನಡೆಯುತ್ತಿದ್ದ ಈ ಜಗಳ ನೋಡಿ ಬೇಸತ್ತ ಸಾರ್ವಜನಿಕರು ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಘಟನೆಯಲ್ಲಿ ಚಾಲಕನ ಯಾವುದೇ ತಪ್ಪು ಇಲ್ಲ, ಸತ್ಯವನ್ನು ತಿಳಿದು ಕ್ರಮ ಕೈಗೊಳ್ಳಿ ಎಂದು ಸಾರ್ವಜನಿಕರು ಪೊಲೀಸರಿಗೆ ಬುದ್ಧಿಮಾತು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *