ಚಿಕ್ಕಮಗಳೂರು: ಕುದುರೆಮುಖ ಘಾಟ್ ತಿರುವಿನಲ್ಲಿ ಕಂಟೈನರ್ ಒಂದು ಕಿರಿದಾದ ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ಸಂಚಾರ ಸ್ಥಗಿತಗೊಂಡಿದ್ದು, ಲಾರಿ ಚಾಲಕರು ಮತ್ತು ಪ್ರವಾಸಿಗರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶುಕ್ರವಾರ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ರಸ್ತೆ ಬದಿಯ ಮಣ್ಣಿನಲ್ಲಿ ಸಿಲುಕಿಕೊಂಡಿದೆ. ಕಿರಿದಾದ ಘಾಟಿ ರಸ್ತೆಯಲ್ಲಿ ಕಂಟೈನರ್ ತೆರವುಗೊಳಿಸಲು ಕಾರ್ಯಚರಣೆ ಕಷ್ಟವಾಗುತ್ತಿದ್ದು, ಸ್ಥಳಕ್ಕೆ ಕುದುರೆಮುಖ ಪೊಲೀಸರು ಭೇಟಿ ನೀಡಿ, ತೆರವು ಕಾರ್ಯ ಆರಂಭಿಸಿದ್ದಾರೆ.
ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ವಾಹನಗಳು ಕಿಲೋಮೀಟರ್ ಗಟ್ಟಲೇ ನಿಂತಿವೆ. ಈ ಮಾರ್ಗವಾಗಿ ಸಂಚರಿಸುತ್ತಿದ್ದ ಲಾರಿ ಚಾಲಕರು ಮತ್ತು ಪ್ರವಾಸಿಗರು ಪರದಾಡುತ್ತಿದ್ದಾರೆ.
ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾತ್ರದ ವಾಹನಗಳ ಸಂಚಾರವನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕುದುರೆಮುಖ ಘಾಟಿ ಮಾರ್ಗವಾಗಿ ಮಂಗಳೂರಿಗೆ ಸಂಚಾರ ಕಲ್ಪಿಸಿತ್ತು. ಇದರಿಂದಾಗಿ ಕಳಸ-ಮಂಗಳೂರು ಸಂಚಾರಕ್ಕಾಗಿ ಕುದುರೆಮುಖ ಘಾಟ್ ಮಾರ್ಗದ ಮೂಲಕ ಅವಕಾಶ ನೀಡಲಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv