ತುಮಕೂರು: ಪಟ್ಟಣ ಪಂಚಾಯ್ತಿಯ ಪ್ರಥಮ ದರ್ಜೆ ಸಹಾಯಕ ಅನುಮಾನಸ್ಪದವಾಗಿ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಕೊರಟಗೆರೆಯಲ್ಲಿ ನಡೆದಿದೆ.
30 ವರ್ಷದ ಮಂಜುನಾಥ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೊರಟಗೆರೆ ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ 5 ವರ್ಷದಿಂದ ಎಫ್ಡಿಸಿಯಾಗಿ ಮಂಜುನಾಥ್ ಕಾರ್ಯ ನಿರ್ವಹಿಸುತ್ತಿದ್ದರು. ಸೋಮವಾರ ಬೆಳಿಗ್ಗೆ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಅರೆನಗ್ನ ಶವ ಪತ್ತೆಯಾಗಿದೆ.
ಪಂಚಾಯ್ತಿ ಹಿಂಭಾಗದ ವಸತಿಗೃಹದಲ್ಲಿ ಶವ ಪತ್ತೆಯಾಗಿದೆ. ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಶಂಕಿಸಲಾಗಿದೆಯಾದರೂ, ಮಂಜುನಾಥ್ ಸಾವು ಹಲವು ಅನುಮಾನಗಳನ್ನು ಮೂಡಿಸಿದೆ. ಮಂಜುನಾಥ್ ಆನೇಕಲ್ ಮೂಲದವರು ಎಂದು ತಿಳಿದುಬಂದಿದೆ.
ಈ ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಕೋರಟಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.