ಚಾಮರಾಜನಗರ: ಮೋಜು ಮಸ್ತಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕೆ ಇಟ್ಟಿರುವಂತಹ ದೃಶ್ಯಗಳು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಬಳಿ ಪ್ರತಿನಿತ್ಯ ಗೋಚರವಾಗುತ್ತಿದೆ.
ಶಿವನಸಮುದ್ರದ ರಂಗನಾಥಸ್ವಾಮಿ ದೇವಸ್ಥಾನದ ಬಳಿ ಹರಿಯುವ ಕಾವೇರಿಯಲ್ಲಿ ಪ್ರವಾಸಿಗರು ಪ್ರಾಣವನ್ನು ಪಣಕ್ಕಿಟ್ಟು ಮೋಜು ಮಸ್ತಿ ಮಾಡುತ್ತಿದ್ದಾರೆ. ಇಲ್ಲಿ ತೆಪ್ಪದಲ್ಲಿನ ಬೋಟಿಂಗ್ನ್ನು ಜಿಲ್ಲಾಡಳಿತ ನಿಷೇಧ ಮಾಡಿ ಎರಡು ವರ್ಷಗಳು ಕಳೆದ್ರೂ ಸಹ, ಇಂದಿಗೂ ಇಲ್ಲಿ ಪ್ರವಾಸಿಗರಿಗೆ ಯಾವುದೇ ಭದ್ರತೆ ಇಲ್ಲದೇ ಬೋಟಿಂಗ್ ನಡೆಲಾಗುತ್ತಿದೆ.
ಇಲ್ಲಿ ತೆಪ್ಪದಲ್ಲಿ ಕೂರುವ ಪ್ರವಾಸಿಗರಿಗೆ ಲೈಫ್ ಜಾಕೆಟ್ ಅಥವಾ ಟ್ಯೂಬ್ಗಳನ್ನು ನೀಡದೇ ತೆಪ್ಪದಲ್ಲಿ ಕೂರಿಸಿ ರೌಂಡ್ ಹೊಡೆಸಲಾಗುತ್ತಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಇಲ್ಲಿ ರಭಸವಾಗಿ ನೀರು ಹರಿಯುತ್ತಿದೆ. ಸ್ವಲ್ಪ ಯಾಮಾರಿದ್ರೂ ಕೂಡ ದೋಣಿಯಲ್ಲಿ ಕೂತವರು ನೀರು ಪಾಲಾಗುವುದು ನಿಶ್ಚಿತ.
ಈ ಬಗ್ಗೆ ಪ್ರವಾಸಿಗರು ಸಹ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ದೋಣಿ ನಡೆಸೋರನ್ನು ಕೇಳಿದರೆ ನಾವು ಹಲವಾರು ವರ್ಷಗಳಿಂದ ಹೀಗೆ ದೋಣಿ ನಡೆಸುತ್ತಿದ್ದೇವೆ. ನಮಗೆ ಸರಿಯಾದ ವ್ಯವಸ್ಥೆ ನೀಡಿ, ಅವಕಾಶ ಕೊಡಿ ಎಂದರೆ ಅಧಿಕಾರಿಗಳು ಕೊಡುತ್ತಿಲ್ಲ. ಅದಕ್ಕೆ ನಾವು ಇಲ್ಲಿ ಎಂಎಲ್ಎ ಹಾಗೂ ಪೊಲೀಸ್ ಅವರನ್ನು ಕೇಳಿಕೊಂಡು ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.