ರಾಜಾಸೀಟ್‍ಗೆ ಮತ್ತಷ್ಟು ಕಳೆ ತಂದ ಪ್ರವಾಸೋದ್ಯಮ ಇಲಾಖೆ

Public TV
1 Min Read

ಮಡಿಕೇರಿ: ಪ್ರವಾಸಿಗರ ಸ್ವರ್ಗ ಕೊಡಗು. ಇಲ್ಲಿನ ಒಂದೊಂದು ತಾಣವೂ ಮನಮೋಹಕ. ಮಡಿಕೇರಿಯ ಪ್ರವಾಸಿ ತಾಣಗಳ ಮುಕುಟ ರಾಜಾಸೀಟ್. ಸಂಜೆ ಆಗುತ್ತಲೇ ಸೂರ್ಯಾಸ್ತದ ವಿಹಂಗಮ ನೋಟ ಪ್ರಕೃತಿಯ ನೈಜ ಸೌಂದರ್ಯವನ್ನು ಅನಾವರಣಗೊಳಿಸುತ್ತೆ. ಇಂತಹ ರಾಜಾಸೀಟ್‍ಗೆ ಮತ್ತಷ್ಟು ಕಳೆ ತರುವುದ್ದಕ್ಕೆ ಪ್ರವಾಸೋದ್ಯಮ ದಿನಚಾರಣೆ ಅಂಗವಾಗಿ ಪ್ರವಾಸಿಗರಿಗೆ ಕೊಡವ ಸಂಸ್ಕೃತಿ ರಾಜ್ಯದ ವಿವಿಧ ಭಾಷೆಯ ಬಿಂಬಿಸುವ ಕಾರ್ಯಕ್ರಮವನ್ನು ರಾಜಾಸೀಟ್ ವ್ಯೂ ಪಾಯಿಂಟ್‍ನ ಸ್ಥಳದಲ್ಲಿ ಆಯೋಜಿಸಲಾಗಿತ್ತು. ಬಂದ ಪ್ರವಾಸಿಗರು ಸಾಂಸ್ಕೃತಿಕ ಕಾರ್ಯಕ್ರಮ ಕಂಡು ಖುಷಿಪಟ್ಟರು.

ರಾಜಾಸೀಟ್ ವೀಕೆಂಡ್ ಎಂದರೆ ಸಾಕು ಮಂಜಿನ ನಗರಿ ಮಡಿಕೇರಿ ಪ್ರವಾಸಿಗರಿಂದ ತುಂಬಿ ಹೋಗುತ್ತೆ. ದೇಶದ ವಿವಿಧ ರಾಜ್ಯಗಳಿಂದ ಕೊಡಗಿನತ್ತ ಲಗ್ಗೆಯಿಡುವ ಪ್ರಕೃತಿ ಪ್ರೇಮಿಗಳು ಜಿಲ್ಲೆ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರಮುಖ ಆಕರ್ಷಣೆ ಮಡಿಕೇರಿಯ ರಾಜಾಸೀಟ್ ಬೆಳಗ್ಗೆಯಿಂದ ಜಗತ್ತನ್ನು ಬೆಳಗಿ ಸಂಜೆ ಆಗುತ್ತಲೇ ಇಲ್ಲಿನ ಬೆಟ್ಟಗುಡ್ಡಗಳ ನಡುವೆ ಮುಳುಗುವ ಸೂರ್ಯನನ್ನು ನೋಡುವುದೇ ಒಂದು ವಿಸ್ಮಯ. ಆದರೆ ಮಳೆಗಾಲ ಬಂದರೆ ನಿರಂತರ ಸುರಿಯುವ ಮಳೆ ಮುಂಜು ಮುಸುಕಿನ ವಾತಾವರಣದಿಂದಾಗಿ ಸೂರ್ಯಾಸ್ತವನ್ನು ನೋಡಲು ಸಾಧ್ಯವಾಗಲ್ಲ. ಈ ನಿಟ್ಟಿನಲ್ಲಿ ಇಂದು ಪ್ರವಾಸೋದ್ಯಮ ಇಲಾಖೆಯಿಂದ ಕೊಡವ ಸಂಸ್ಕೃತಿ ದೇಶದ ವಿವಿಧ ಭಾಷೆಗಳ ನೃತ್ಯ ಕಾರ್ಯಕ್ರಮ ಆಯೋಜಿಲಾಗಿತ್ತು.

ಸಾಂಪ್ರದಾಯಿಕ ಉಡುಗೆ ತೊಟ್ಟು ಯುವಕರು ನಲಿದಾಡಿದ್ದಾರೆ, ಯುವತಿಯರು ಬಣ್ಣ ಬಣ್ಣದ ಸೀರೆಯುಟ್ಟು ಲಯಬದ್ದ ನಾದಕ್ಕೆ ಹಾಡಿ ಕುಣಿದಿದ್ದಾರೆ. ಪ್ರವಾಸೋದ್ಯಮ ದಿನಚಾರಣೆ ಅಂಗವಾಗಿ ಪ್ರವಾಸಿಗರಿಗೆ ಕೊಡವ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮವನ್ನು ರಾಜಾಸೀಟ್ ವ್ಯೂ ಪಾಯಿಂಟ್‍ನ ಸ್ಥಳದಲ್ಲಿ ಆಯೋಜಿಸಲಾಗಿತ್ತು. ಕೊಡಗಿನ ಜಾನಪದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಕೊಡಗಿನ ಮಡಿಕೇರಿ ಹಾಗೂ ವಿರಾಜಪೇಟೆ ಕಾಲೇಜು ವಿದ್ಯಾರ್ಥಿಗಳಿಂದ ಕೊಡವ ಸಂಸ್ಕೃತಿ ಬಿಂಬಿಸುವ ಉಮ್ಮತಾಟ್ ಕೋಲಾಟ್, ಜಾನಪದ ಕಲೆ ಹಾಗೂ ವಿವಿಧ ಭಾಷೆಗಳ ನೃತ್ಯಗಳನ್ನು ಪ್ರದರ್ಶಿಸಲಾಯಿತ್ತು. ಕೊಡಗಿನ ಸಂಸ್ಕ್ರತಿ ಯಾವ ದೇಶಕ್ಕೂ ಕಡಿಮೆಯಿಲ್ಲ ಎನ್ನುವಂತೆ ಕುಣಿದು ನಲಿದ ವಿದ್ಯಾರ್ಥಿಗಳು ಪ್ರವಾಸಿಗರ ಮೆಚ್ಚುಗೆ ಗಳಿಸಿದರು. ಅಷ್ಟೇ ಅಲ್ಲದೇ ಕೊಡವ ವಾಲಗಕ್ಕೆ ಪ್ರವಾಸಿಗರು ಹೆಜ್ಜೆ ಹಾಕಿದು ವಿಶೇಷವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *