ಪಾಕಿಸ್ತಾನ್ ಜಿಂದಾಬಾದ್ ಕೂಗಿದವನ ಬಂಧನಕ್ಕೆ 3 ದಿನ ಮಾಡಿದ್ರಿ: ಕಾಂಗ್ರೆಸ್ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Public TV
2 Min Read

ಚಿಕ್ಕಮಗಳೂರು: ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವನ ಬಂಧನಕ್ಕೆ 3 ದಿನ ಮಾಡಿದ್ರಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಸಿ.ಟಿ.ರವಿ (C.T.Ravi) ವಾಗ್ದಾಳಿ ನಡೆಸಿದರು.

ಬಿಜೆಪಿ (BJP) ಶಾಸಕ ಮುನಿರತ್ನ ಬಂಧನ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವನ ಬಂಧನಕ್ಕೆ 3 ದಿನ ಮಾಡಿದ್ರಿ. ಎಫ್‌ಎಸ್‌ಎಲ್ ರಿಪೋರ್ಟ್ ಬರಲಿ ಎಂದು ಕಾದಿದ್ರಿ. ಮುನಿರತ್ನ ಅವರು ನನ್ನ ವಾಯ್ಸ್ ಅಲ್ಲ, ನಕಲು ಮಾಡಿದ್ದಾರೆ ಎಂದಿದ್ದಾರೆ. ಮಾಜಿ ಸಂಸದ ಡಿ.ಕೆ.ಸುರೇಶ್, ಡಿಸಿಎಂ ಡಿಕೆಶಿ ಒತ್ತಡದ ಪ್ಲ್ಯಾನ್ ಎಂದು ಆರೋಪಿಸಿದ್ದಾರೆ.‌ ಗೃಹ ಸಚಿವರೇ, ಈ ವಾಯ್ಸ್ ಮುನಿರತ್ನ ಅವರದ್ದೇ ಎಂದು ಎಫ್‌ಎಸ್‌ಎಗೆ ಕಳಿಸಿದ್ರಾ, ವರದಿ ಬಂದಿದ್ಯಾ? ವರದಿ ಬರುವ ಮುನ್ನವೇ ನಿಮ್ಮ ಅರೆಸ್ಟ್ ಆತುರ ತೋರಿಸುತ್ತೆ. ನಿಮ್ಮ ದ್ವೇಷದ ರಾಜಕಾರಣ ತೋರಿಸುತ್ತೆ ಎಂದು ಟೀಕಿಸಿದರು. ಇದನ್ನೂ ಓದಿ: ಬೆಂಗಳೂರಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ನಿಫಾಗೆ ಬಲಿ – ರಾಜ್ಯದಲ್ಲಿ ಆತಂಕ

ಯಾದಗಿರಿ ಶಾಸಕನ ಮೇಲೆ ಮೃತ ಪಿಎಎಸ್‌ಐ ಪತ್ನಿ ದೂರು ನೀಡಿದ್ರು. ಅರೆಸ್ಟ್ ಮಾಡಿದ್ರಾ? ಅರೆಸ್ಟ್ ಮಾಡುವ ಬದಲು ಸಿಎಂ ಮನೆಗೆ ಭೋಜನ ಕೂಟಕ್ಕೆ ಆಹ್ವಾನ ನೀಡಿದ್ರಿ. ಕೃಷಿ ಸಚಿವ ಚಲುವರಾಯಸ್ವಾಮಿ ಮೇಲೆ ಅಧಿಕಾರಿ ರಾಜ್ಯಪಾಲರಕ್ಕೆ ದೂರು ನೀಡಿದ್ರು. ನಿಮ್ಮ ಕೃಷಿ ಸಚಿವರನ್ನ ನೀವು ಅರೆಸ್ಟ್ ಮಾಡಿದ್ರಾ? ಗೃಹ ಸಚಿವರೇ ನಿಮಗೆ ಅವರ ಬಗ್ಗೆ ಮೌನ. ಬಿಜೆಪಿ ಶಾಸಕರ ಬಗ್ಗೆ ಆತುರ ಎಂದು ತರಾಟೆಗೆ ತೆಗೆದುಕೊಂಡರು.

ಪ್ರಜಾಪ್ರಭುತ್ವ ದಿನ, ಒಳ್ಳೆ ಕಾರ್ಯಕ್ರಮ, ಆದ್ರೆ ಅವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಅನ್ನೋದು ಸಂವಿಧಾನದ ಆಶಯ. ಈಗ ಆಗಿರೋದು ಏನು? ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಅನ್ನೋ ರೀತಿ ರಾಜಕಾರಣ ಬದಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಐದು ಕಡೆ ಕುಟುಂಬದವರಿಗೆ ಟಿಕೆಟ್ ಕೊಟ್ಟಿತ್ತು. ಬೀದರ್‌ನಿಂದ ಚಾಮರಾಜನಗರದವರೆಗೂ ಕಾಂಗ್ರೆಸ್ 21 ಕಡೆ ಕುಟುಂಬದವರಿಗೆ ಟಿಕೆಟ್ ಕೊಟ್ಟಿತ್ತು. ಪ್ರಜಾಪ್ರಭುತ್ವದ ಆಶಯ ಏನಾಗುತ್ತೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಅಂತ ಹೇಗಂತೀರಾ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ರಾಹುಲ್‌ ಗಾಂಧಿ ಭಾರತದ ನಂ.1 ಭಯೋತ್ಪಾದಕ: ಕೇಂದ್ರ ಸಚಿವ ವಿವಾದಾತ್ಮಕ ಹೇಳಿಕೆ

ವಂಶವಾದ, ವಂಶವಾದದ ರಾಜಕಾರಣವನ್ನ ಪ್ರಜಾಪ್ರಭುತ್ವದಲ್ಲಿ ಬೆರೆಸಿದ್ದು ಯಾರು? ಕಾಂಗ್ರೆಸ್ಸಿನ ಓನರ್ ಯಾರು, ನೆಹರೂರಿಂದ ಸೋನಿಯಾ ಗಾಂಧಿಗೆ ಬಂದು ನಿಂತಿದೆ. ನಿಮ್ಮ ಪಕ್ಷದಲ್ಲೇ ಪ್ರಜಾಪ್ರಭುತ್ವ ಇಲ್ಲ. ಇನ್ನು ಪ್ರಜಾಪ್ರಭುತ್ವ ಉಳಿಸೋದೆಲ್ಲಿ ಎಂದು ಪ್ರಶ್ನಿಸಿದರು.

Share This Article