ನೀರು ಖಾಲಿಯಾಗಿದ್ದಕ್ಕೆ ವಿಸ್ಕಿ ಜೊತೆ ಮೂತ್ರ ಮಿಕ್ಸ್ ಮಾಡ್ಕೋ ಎಂದು ರೇಗಿಸಿದ ಸ್ನೇಹಿತನನ್ನ ಕೊಂದೇಬಿಟ್ಟ

Public TV
1 Min Read

ಮುಂಬೈ: ನೀರು ಖಾಲಿಯಾಗಿದ್ದಕ್ಕೆ ವಿಸ್ಕಿ ಜೊತೆ ಮೂತ್ರ ಮಿಕ್ಸ್ ಮಾಡಿಕೋ ಎಂದು ಹೇಳಿದ 25 ವರ್ಷದ ವ್ಯಕ್ತಿಯನ್ನ ಆತನ ಸ್ನೇಹಿತ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಭಾಯಂದರ್ ನಲ್ಲಿ ನಡೆದಿದೆ.

ಶನಿವಾರ ರಾತ್ರಿ ಸಂದೀಪ್ ಗವಾಸ್(27) ಹಾಗೂ ಅಚ್ಯುತ್ ಚೌಬೆ(25) ಇತರೆ ಮೂವರು ಸ್ನೇಹಿತರೊಂದಿಗೆ ಮದ್ಯಪಾನ ಮಾಡುತ್ತಿದ್ದರು. ಭಾನುವಾರ ನಸುಕಿನ ಜಾವದವರೆಗೂ ಇವರ ಮದ್ಯಪಾನ ಮುಂದುವರೆದಿತ್ತು. ಸುಮಾರು 2 ಗಂಟೆ ವೇಳೆಯಲ್ಲಿ ಗವಾಸ್ ಮತ್ತೊಂದು ಬಾರಿ ಮದ್ಯ ಕುಡಿಯಲು ಮುಂದಾಗಿದ್ದ. ಆದ್ರೆ ಮದ್ಯದ ಜೊತೆ ಮಿಕ್ಸ್ ಮಾಡಿಕೊಳ್ಳಲು ನೀರು ಖಾಲಿಯಾಗಿತ್ತು. ಗವಾಸ್ ನೀರಿಗಾಗಿ ಹುಡುಕುತ್ತಿದ್ದ ವೇಳೆ ಸ್ನೇಹಿತ ಚೌಬೆ, ಮದ್ಯದೊಂದಿಗೆ ಆತನ ಮೂತ್ರ ಮಿಕ್ಸ್ ಮಾಡಿಕೊಳ್ಳುವಂತೆ ಛೇಡಿಸಿದ್ದ. ಗುಂಪಿನಲ್ಲಿದ್ದ ಇತರರು ಕೂಡ ಚೌಬೆಯ ಜೊತೆಗೂಡಿ ಗವಾಸ್ ನನ್ನು ರೇಗಿಸಿದ್ದರು.

ಇದರಿಂದ ಕೋಪಗೊಂಡ ಗವಾಸ್ ಮರದ ತುಂಡು ತೆಗೆದುಕೊಂಡು ಚೌಬೆ ತಲೆ ಮೇಲೆ ಹೊಡೆದಿದ್ದಾನೆ. ಪರಿಣಾಮ ಚೌಬೆಗೆ ರಕ್ತಸ್ರಾವವಾಗಲು ಶುರುವಾಗಿದೆ. ಈ ವೇಳೆ ಸ್ನೇಹಿತ ವಿವೇಕ್ ಮಧ್ಯಪ್ರವೇಶಿಸಲು ಯತ್ನಿಸಿದ್ದು, ಆತನ ಮೇಲೂ ಹಲ್ಲೆ ನಡೆದಿದೆ. ಚೌಬೆಗೆ ರಕ್ತಸ್ರಾವವಾಗೋದನ್ನ ನೋಡಿ ಗವಾಸ್ ಹಾಗೂ ಸ್ನೇಹಿತರು ಸ್ಥಳದಿಂದ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವವಾದ ಕಾರಣ ಚೌಬೆ ಸಾವನ್ನಪ್ಪಿದ್ದಾನೆ. ಮರುದಿನ ಬೆಳಗ್ಗೆ ಸ್ಥಳೀಯರು ಮೃತದೇಹವನ್ನ ನೋಡಿದ್ದಾರೆ.

ನವ್‍ಘರ್ ಪೊಲೀಸರು ಸೋಮವಾರದಂದು ಆರೋಪಿ ಗವಾಸ್ ನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *