ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ವೀರ ಕನ್ನಡಿಗ ಸುಹಾಸ್ ಬೆಳ್ಳಿ ಸಾಧನೆ

Public TV
2 Min Read

ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ವೀರ ಕನ್ನಡಿಗ ಬೆಳ್ಳಿ ಗೆದ್ದಿದ್ದಾರೆ. ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಬ್ಯಾಡ್ಮಿಂಟನ್‍ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದು, ಈ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಬ್ಯಾಡ್ಮಿಂಟನ್ ಫೈನಲ್‍ನ SL4 ವಿಭಾಗದಲ್ಲಿ ಫ್ರಾನ್ಸ್ ನ ಲುಕಾಸ್ ಮಜೂರ್ ಎದುರು 15-21, 21-17, 21-15 ಅಂತರದಲ್ಲಿ ಸೋಲು ಅನುಭವಿಸಿ ಬೆಳ್ಳಿ ಕೊರಳಿಗೇರಿಸಿಕೊಂಡಿದ್ದಾರೆ. ಇಂದು ಮುಂಜಾನೆ ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಫ್ರಾನ್ಸ್ ನ ಲುಕಾಸ್ ಮಜೂರ್ ವಿರುದ್ಧ ಸೋತಿದ್ದಾರೆ. ಇದನ್ನೂ ಓದಿ: ಬ್ಯಾಡ್ಮಿಂಟನ್ ಅವಳಿ ಪದಕ- ಪ್ರಮೋದ್ ಭಗತ್‍ಗೆ ಚಿನ್ನ, ಮನೋಜ್ ಸರ್ಕಾರ್‌ಗೆ ಕಂಚು

ಶಿವಮೊಗ್ಗ ಮೂಲದ ಯತಿರಾಜ್ ಹಾಗೂ ಹಾಸನ ಮೂಲದ ಜಯಶ್ರೀ ಅವರ ಪುತ್ರ ಸುಹಾಸ್ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಸದ್ಯ ಉತ್ತರ ಪ್ರದೇಶದ ನೋಯ್ಡಾದಲ್ಲಿ ಸುಹಾಸ್ ಜಿಲ್ಲಾಧಿಕಾರಿಯಾಗಿದ್ದಾರೆ. ಸುಹಾಸ್ ಅವರ ಪತ್ನಿ ರಿತು ಗಾಜಿಯಾಬಾದ್‍ನಲ್ಲಿ ಸಹಾಯಕ ವಿಭಾಗಾಧಿಕಾರಿ ಆಗಿದ್ದಾರೆ.

ಸುಹಾಸ್ ಯತಿರಾಜ್ ಸಾಧನೆಗೆ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಭಿನಂದನೆ ಸಲ್ಲಿಸಿದ್ದಾರೆ. ಸುಹಾಸ್ ಅವರ ಬೆಳ್ಳಿ ಬೇಟೆಯೊಂದಿಗೆ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತದ ಪದಕಗಳ ಸಂಖ್ಯೆ 19ಕ್ಕೆ ಏರಿದೆ. 5 ಚಿನ್ನ, 8 ಬೆಳ್ಳಿ, 6 ಕಂಚು ಪದಕಗಳನ್ನು ಭಾರತ ಗೆದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *