ಇಂದು ನಿಖಿಲ್ ನಾಮಪತ್ರ ತಿರಸ್ಕಾರ?

Public TV
1 Min Read

ಮಂಡ್ಯ: ಮೈತ್ರಿ ಅಭ್ಯರ್ಥಿಯ ನಾಮಪತ್ರ ತಿರಸ್ಕಾರ ಮಾಡುವಂತೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಚುನಾವಣಾ ಏಜೆಂಟ್ ಮದನ್ ಕುಮಾರ್ ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದೂರಿನ ವಿಚಾರಣೆ ಇಂದು ನಡೆಯಲಿದೆ.

ಇಂದು ಬೆಳಗ್ಗೆ 11 ಗಂಟೆಗೆ ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿಗಳ ಆದೇಶದಂತೆ, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ದೂರಿನ ವಿಚಾರಣೆ ನಡೆಸಲಿದ್ದಾರೆ.

ತಾವು ನೀಡಿರುವ ದೂರಿಗೆ ಸಂಬಂಧಪಟ್ಟಂತೆ ಸೂಕ್ತ ದಾಖಲೆಗಳೊಂದಿಗೆ ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ದೂರದಾರ ಮದನ್ ಕುಮಾರ್ ಗೆ ಸೂಚಿಸಲಾಗಿದೆ. ಇಂದು ನಡೆಯುವ ವಿಚಾರಣೆಯಲ್ಲಿ ನಿಖಿಲ್ ನಾಮಪತ್ರ ತಿರಸ್ಕಾರಗೊಳ್ಳುತ್ತಾ? ಪುರಸ್ಕಾರಗೊಳ್ಳುತ್ತಾ? ಅಥವಾ ಸುಮಲತಾಗೆ ಮುಖಭಂಗವಾಗುತ್ತಾ? ಎಂಬುದನ್ನು ತಿಳಿಯ ಬಹುದು.

ಮದನ್ ಆರೋಪವೇನು?
ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರದಲ್ಲಿ ಎಲ್ಲಾ ಕಾಲಮ್ ನನ್ನು ಖಾಲಿ ಬಿಟ್ಟಿದ್ದಾರೆ. ಎಸ್ ಅಥವಾ ನೋ ಎಂದು ಕೂಡ ಭರ್ತಿ ಮಾಡಲಿಲ್ಲ. ಅಷ್ಟೇ ಅಲ್ಲದೆ ನಾಮಪತ್ರ ಸಲ್ಲಿಸುವಾಗ ಯಾವುದೇ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿಲ್ಲ. ಈ ಬಗ್ಗೆ ಸುದ್ದಿ ಹರಿದಾಡುತ್ತಿದ್ದಂತೆ ಜಿಲ್ಲಾಧಿಕಾರಿಯೇ ಖುದ್ದಾಗಿ ನಿಖಿಲ್ ಅವರನ್ನು ಕರೆಸಿ ನಾಮಪತ್ರ ತುಂಬಿಸಿದ್ದಾರೆ ಎಂದು ಮದನ್ ಕುಮಾರ್ ಆರೋಪಿಸಿದ್ದಾರೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ದೂರಿನಲ್ಲಿರುವ ಅಂಶಗಳಿಗೆ ಸಂಬಂಧಿಸಿದಂತೆ ನಿಮ್ಮ ಸಮರ್ಥನೆ ಹಾಗೂ ಸೂಕ್ತ ದಾಖಲೆ ಅಥವಾ ಮಾಹಿತಿ ನೀಡಿ ಎಂದು ಇಂದು ಪ್ರಾದೇಶಿಕ ಆಯುಕ್ತರು ಮದನ್ ಕುಮಾರ್ ಅವರನ್ನು ವಿಚಾರಣೆ ಮಾಡಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *