ಕುಸುಮಾರನ್ನು ಶಾಸಕಿಯನ್ನಾಗಿ ಮಾಡಲು ನನ್ನ ಕೊಲೆಗೆ ಸಂಚು, ಆಸೀಡ್‌ ದಾಳಿ : ಮುನಿರತ್ನ

Public TV
1 Min Read

– ಡಿಕೆ ಬ್ರದರ್ಸ್‌ ವಿರುದ್ಧ ಮುನಿರತ್ನ ನೇರಾನೇರ ಆರೋಪ

ಬೆಂಗಳೂರು: ಕುಸುಮಾ ಅವರನ್ನು ಶಾಸಕಿಯನ್ನಾಗಿ ಮಾಡಲು ಡಿಕೆ ಸುರೇಶ್‌, ಡಿಕೆ ಶಿವಕುಮಾರ್‌ ಅವರ ಕಡೆಯವರಿಂದ  ನನ್ನ ಮೇಲೆ ಆಸೀಡ್‌ ದಾಳಿ ನಡೆದಿದೆ ಎಂದು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಲಗ್ಗೆರೆ ಬಳಿಕ ಲಕ್ಷ್ಮಿದೇವಿ ನಗರದಲ್ಲಿ ವಾಜಪೇಯಿಯವರ 100 ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮುನಿರತ್ನ ಭಾಗಿಯಾಗಿದ್ದರು. ಈ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದಾಗ ಮುನಿರತ್ನ ಮೇಲೆ ಕಲ್ಲು ಮತ್ತು ಮೊಟ್ಟೆ  ದಾಳಿ ನಡೆದಿದೆ. ಕಾರಿನ ಗಾಜಿನ ಮೇಲೆಯೇ ಕಲ್ಲು ಬಿದ್ದಿದೆ. ಕೂಡಲೇ ಪೊಲೀಸರು ಮೊಟ್ಟೆ ಎಸೆದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

 

ಮೊಟ್ಟೆಯ ಒಳಗಡೆ ಆಸಿಡ್ ಹಾಕಿ ದಾಳಿ ಮಾಡಿದ್ದಾರೆ. ಗುಂಪು ದಾಳಿ ಮಾಡಿ ನನ್ನ ಕೊಲೆ ಮಾಡಲು ಮುಂದಾಗಿದ್ದಾರೆ. ಡಿಕೆ ಸುರೇಶ್‌ ಅವರಿಗೆ ಕುಸುಮಾ ಅವರನ್ನು ಶಾಸಕಿಯನ್ನಾಗಿ ಮಾಡಬೇಕು ಎಂಬ ಆಸೆ ಇದೆ. ಈ ಕಾರಣಕ್ಕೆ ನನ್ನ ಮೇಲೆ ದಾಳಿ ನಡೆದಿದೆ ಎಂದು ದೂರಿದರು.

ಇದು ಕಾಂಗ್ರೆಸ್ ಪ್ರೇರಿತ ಕೃತ್ಯವಾಗಿದ್ದು ಡಿಕೆ ಸುರೇಶ್, ಡಿಕೆ ಶಿವಕುಮಾರ್‌, ಕುಸುಮ ತಂದೆ ಹನುಮಂತರಾಯಪ್ಪ ಇದಕ್ಕೆ ನೇರ ಹೊಣೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಇತ್ತೀಚೆಗೆ ಕಲವರು ಮನೆಯ ಮುಂದೆಯೇ ಬಂದು ರಾಜೀನಾಮೆ ಕೊಡಿ. ಇಲ್ಲದೇ ಇದ್ದರೆ ನಿಮ್ಮನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ತಿಳಿಸಿದರು.

 

ಕೋರ್ಟ್‌ ವಿಚಾರಣೆಗೆ ಹಾಜರಾಗುವ ಸಮಯದಲ್ಲಿ ವಕೀಲರ ಉಡುಪು ಧರಿಸಿದ್ದ ವ್ಯಕ್ತಿಯೊಬ್ಬರು ನನ್ನ ಬಳಿ ಬಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ. ಇಲ್ಲದೇ ಇದ್ದರೆ ನಿಮ್ಮ ಮೇಲೆ ಪೋಕ್ಸೋ ಕೇಸ್‌ ಹಾಕಲಾಗುವುದು ಎಂದು ಹೇಳಿದ್ದರು. ನಾನು ರಕ್ಷಣೆಗಾಗಿ ಗನ್ ಮ್ಯಾನ್ ಕೊಡಿ ಎಂದು ಸರ್ಕಾರಕ್ಕೆ ಕೇಳಿದ್ದೆ. ನನ್ನನ್ನು ಕೊಲೆ ಮಾಡಿಯಾದರೂ ಕುಸುಮಗೆ ಶಾಸಕ ಪಟ್ಟ ಕೊಡಿಸಬೇಕು ಎನ್ನುವುದು ಡಿಕೆ ಸುರೇಶ್ ಆಸೆ ಎಂದು ದೂರಿದರು.

ಈಗ ಮುನಿರತ್ನ ಅವರನ್ನು ಕೆಸಿ ಜನರಲ್‌ ಆಸ್ಪತ್ರಗೆ ದಾಖಲಾಗಿದ್ದಾರೆ. ಹಲವು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ.

Share This Article