ಬಸ್ಸಿನಲ್ಲಿ ಮೃತಪಟ್ಟ ಪ್ರಯಾಣಿಕನ ಶವ ರಸ್ತೆ ಬದಿ ಇಳಿಸಿ ಹೋದ ಕಂಡಕ್ಟರ್!

Public TV
1 Min Read

ಚೆನ್ನೈ: ತಮಿಳುನಾಡು ರಾಜ್ಯ ರಸ್ತೆ ಸಾರಿಗೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದು, ಇದನ್ನು ಕಂಡ ಬಸ್ ಕಂಡಕ್ಟರ್ ವ್ಯಕ್ತಿಯ ಶವವನ್ನು ಆತನ ಸ್ನೇಹಿತನ ಜೊತೆಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಬಿಟ್ಟು ತೆರಳಿರುವ ಆಘಾತಕಾರಿ ಘಟನೆ ಕೃಷ್ಣಗಿರಿ ಬಳಿ ನಡೆದಿದೆ.

ರಾಧಾ ಕೃಷ್ಣನ್(43) ಹಾಗೂ ಅವರ ಸ್ನೇಹಿತ ವೀರನ್(54) ಎಂಬುವರು ಬೆಂಗಳೂರಿನಿಂದ ತಿರುವಣ್ಣಾಮಲೈಗೆ ತಮಿಳುನಾಡು ಸಾರಿಗೆ ಇಲಾಖೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ವೀರನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಿಷಯ ತಿಳಿದ ಬಸ್ ಕಂಡಕ್ಟರ್ ವೀರನ್ ಅವರ ಮೃತದೇಹ ಹಾಗೂ ಅವರ ಸ್ನೇಹಿತ ರಾಧಾ ಕೃಷ್ಣನ್ ಜೊತೆ ಬಸ್ಸಿನಿಂದ ಕೆಳಗಿಳಿಸಿ ಮಾರ್ಗ ಮಧ್ಯೆ ಬಿಟ್ಟು ತೆರಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಶವದ ಪಕ್ಕದಲ್ಲಿ ರಾಧಾ ಕೃಷ್ಣನ್ ಅವರು ತಮ್ಮ ಸ್ನೇಹಿತನ ಶವವಿಟ್ಟು ಮೂರು ಗಂಟೆಗಳ ಕಾಲ ಕುಳಿತಿದ್ದಾರೆ. ಈ ವೇಳೆ ರಾಧಾಕೃಷ್ಣನ್ ಅವರನ್ನು ಕಂಡ ಮಾಧ್ಯಮದವರು ಅವರನ್ನು ಪ್ರಶ್ನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಇಬ್ಬರು ಮೂಲತಃ ತಮಿಳುನಾಡಿನ ಕೃಷ್ಣಗಿರಿ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು.

ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿರುವ ರಾಧಾಕೃಷ್ಣನ್ ಅವರು, ಬಸ್ ನಿಂದ ನಮ್ಮನ್ನು ಕೆಳಗಿಳಿಸುವಾಗ ವೇಳೆ ಟಿಕೆಟ್ ನೀಡಿದ್ದ ತಲಾ 150 ರೂ. ವನ್ನು ವಾಪಸ್ ಕೇಳಿಕೊಂಡರು ಕಂಡಕ್ಟರ್ ನೀಡಲಿಲ್ಲ. ಈ ವೇಳೆ ಅವರನ್ನು ಗೋಗರೆದ ಕಾರಣ 150 ರೂ. ನೀಡಿದರು ಎಂದು ತಿಳಿದ್ದಾರೆ.

ಬೇರೆ ವಾಹನಗಳಲ್ಲಿ ಮೃತದೇಹವನ್ನು ಸಾಗಿಸಲು ಜನ ಅನುಮತಿ ನೀಡದ ಕಾರಣ ನಾನು ಯಾವುದಾದರೂ ಅಂಬುಲೆನ್ಸ್ ಬರಬಹುದು ಎಂದು ಕಾದು ಕುಳಿತ್ತಿದ್ದೆ ಎಂದು ತಿಳಿಸಿದ್ದರು. ಮಾಧ್ಯಮದಿಂದ ಮಾಹಿತಿ ಪಡೆದ ಸ್ಥಳಿಯ ಪೊಲೀಸರು ಸ್ಥಳಕ್ಕೆ ಆಗಮಿಸಿ ವೀರನ್ ಅವರ ಮೃತ ದೇಹವನ್ನು ಅಂಬುಲೆನ್ಸ್ ಮೂಲಕ ರವಾನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *