ತಿರುಪತಿ ತಿರುಮಲ ಬಂಗಾರದ ರಹಸ್ಯ ಬಯಲು – ಪ್ರಾಂಗಣದ ಕೆಳಗೆ ಇದೆ ನಿಧಿಯ ಕೋಣೆ!

Public TV
2 Min Read

ಅಮರಾವತಿ: ಕಲಿಯುಗದ ವೈಕುಂಠ ತಿರುಪತಿ ದೇವಸ್ಥಾನದ ನೆಲಮಾಳಿಗೆಯಲ್ಲಿ ಅಪಾರ ಪ್ರಮಾಣದ ಸಂಪತ್ತಿರುವ ರಹಸ್ಯ ಕೋಣೆಯೊಂದಿದೆ ಎನ್ನಲಾಗುತ್ತಿದೆ.

ಕೇರಳದ ಅನಂತ ಪದ್ಮನಾಭ ದೇವಾಲಯದ ನೆಲಮಾಳಿಗೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇತ್ತೀಚೆಗೆ ತಿರುಪತಿ ತಿರುಮಲದಲ್ಲಿಯ ನೆಲಮಾಳಿಗೆಯಲ್ಲಿ ಅದನ್ನೂ ಮೀರಿಸುವಷ್ಟು ಸಂಪತ್ತಿರುವ ಕೋಣೆಯಿಂದ ಎಂಬ ಮಾತುಗಳು ಕೇಳಿಬರುತ್ತಿದೆ.

ಈಗ ಇಂಥದೊಂದು ರಹಸ್ಯ ಬೆಳಕಿಗೆ ಬರಲು ಕಾರಣವಾಗಿದ್ದು, ಟಿಟಿಡಿಯ ಮಾಜಿ ಪ್ರಧಾನ ಅರ್ಚಕ ಹಾಗೂ ಆಗಮ ಶಾಸ್ತ್ರಜ್ಞ ರಮಣ ದೀಕ್ಷತುಲು ಅವರ ಆರೋಪ. ದೇವಸ್ಥಾನದ ಸಿಬ್ಬಂದಿ ಪ್ರಸಾದ ತಯಾರಿಸುವ ಕೋಣೆಯನ್ನು ದೇವಸ್ಥಾನದ ಆಡಳಿತ ಮಂಡಳಿಯ ಅನುಮತಿಯಿಲ್ಲದೇ ದುರಸ್ತಿ ಮಾಡಿದ್ದಾರೆ. ಆದರೆ ಅಲ್ಲಿ ಭೂಮಿಯನ್ನು ಅಗೆದಿರುವ ಕುರುಹುಗಳು ಪತ್ತೆಯಾಗಿವೆ.

ಇದನ್ನು ವಿಚಾರಿಸಿದಾಗ ಕೋಣೆಯಲ್ಲಿ ಕಲ್ಲಿನ ಹಾಸನ್ನು ಬದಲಿಸಬೇಕಿತ್ತು ಎಂದು ಸಿಬ್ಬಂದಿ ಹೇಳಿದ್ದಾರೆ. ಆದರೆ 5ರಿಂದ 6 ಕಲ್ಲುಗಳನ್ನು ಬದಲಾಯಿಸಲು ನೆಲ ಅಗೆಯುವ ಅವಶ್ಯಕತೆ ಏನಿತ್ತು? 25 ದಿನಗಳ ಕಾಲ ಆ ಕೋಣೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಪೂರ್ವಾನುಮತಿಯಿಲ್ಲದೇ ಮುಚ್ಚಿದ್ದೇಕೆ? ಎಂಬುದು ರಮಣ ದೀಕ್ಷತುಲು ಅವರ ಪ್ರಶ್ನೆಯಾಗಿದೆ. ಈ ವಿಚಾರ ಇದೀಗ ರಹಸ್ಯ ಸಂಪತ್ತಿನ ಕುರಿತ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಪುಸ್ತಕವೊಂದರಲ್ಲಿದೆ ಈ ಸಂಪತ್ತಿನ ಉಲ್ಲೇಖ:
ಈ ರಹಸ್ಯ ಸಂಪತ್ತನ್ನು ಕುರಿತಂತೆ ಲೇಖಕರೊಬ್ಬರು 18ನೇ ಶತಮಾನದಲ್ಲಿಯೇ ಉಲ್ಲೇಖ ನೀಡಿದ್ದರು. ಲೇಖಕ ವಿ ಎನ್ ಶ್ರೀನಿವಾಸ್ ಎಂಬವರು ತಮ್ಮ ಸವಾಲ್-ಇ-ಜವಾಬ್ ಎಂಬ ಕೃತಿಯಲ್ಲಿ ತಿರುಪತಿ ತಿರುಮಲದ ರಹಸ್ಯ ಸಂಪತ್ತಿನ ಕುರಿತಂತೆ ಉಲ್ಲೇಖಿಸಿದ್ದಾರೆ.

200 ಪುಟಗಳ ಇವರ ಕೃತಿಯ 13 ಮತ್ತು 14 ನೇ ಸಾಲುಗಳಲ್ಲಿ ಈ ಸಂಪತ್ತನ್ನು ಕುರಿತಂತೆ 6 ಸಾಲುಗಳಲ್ಲಿ ಹೇಳಲಾಗಿದೆ. ಪ್ರದಕ್ಷಿಣೆ ಪ್ರಾಂಗಣದ ಕೆಳಗೆ ರಹಸ್ಯ ಕೋಣೆಯೊಂದಿದೆ. ಅದರಲ್ಲಿ ಅಪಾರ ಪ್ರಮಾಣದ ಸಂಪತ್ತಿದೆ. ಭಕ್ತರು ಅದರ ಮೇಲೆಯೇ ನಡೆದಾಡುತ್ತಿದ್ದಾರೆ. ಈ ಕೋಣೆಗೆ ಸಾರ್ವಜನಿಕರ ಪ್ರವೇಶ ನಿಷಿದ್ಧ ಎಂದು ಉಲ್ಲೇಖಿಸಿದ್ದಾರೆ.

ಹೀಗಾಗಿ ಆ ರಹಸ್ಯ ಕೋಣೆಯ ಕುರಿತು ಈಗ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ಆದರೆ ಈ ರಹಸ್ಯ ಕೋಣೆಯ ಇರುವಿಕೆ ಕುರಿತಂತೆ ಮಾಜಿ ಪ್ರಧಾನ ಅರ್ಚಕ ರಮಣ ದೀಕ್ಷಿತಲು ಪ್ರಶ್ನೆಗೆ ದೇವಸ್ಥಾನದ ಆಡಳಿತ ಮಂಡಳಿ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ.

Share This Article
Leave a Comment

Leave a Reply

Your email address will not be published. Required fields are marked *