ಕೇರಳ ಪ್ರವಾಹ – ಮಾರುತಿ ಸುಜುಕಿಯ 357 ಹೊಸ ಕಾರುಗಳು ಗುಜುರಿಗೆ!

Public TV
1 Min Read

ತಿರುವನಂತಪುರ: ಕೇರಳ ಪ್ರವಾಹಕ್ಕೆ ಒಂದೇ ಕಾರ್ ಶೋರೂಂನ 357 ಹೊಸ ಕಾರುಗಳು ಸಂಪೂರ್ಣ ಹಾಳಾಗಿದ್ದು, ಎಲ್ಲಾ ಕಾರುಗಳನ್ನು ಗುಜುರಿಗೆ ಹಾಕಲು ಶೋರೂಂ ಮಾಲೀಕರು ನಿರ್ಧರಿಸಿದ್ದಾರೆ.

ಪ್ರವಾಹದಿಂದಾಗಿ ತ್ರಿಶೂರ್ ನ ಮಾರುತಿ ಸುಜುಕಿ ಕಾರು ಡೀಲರ್ ಬಿಆರ್‌ಡಿ ಕಾರ್ ವರ್ಲ್ಡ್ ಶೋರಂನ ಒಟ್ಟು 357 ಹೊಸ ಕಾರುಗಳೂ ನೀರಿನಿಂದ ತುಂಬಿಕೊಂಡು ಸಂಪೂರ್ಣ ಹಾಳಾಗಿ ಹೋಗಿದೆ. ಇದಲ್ಲದೇ 147 ಬಳಸಿದ ಕಾರುಗಳು ಹಾಗೂ 110 ಗ್ರಾಹಕರ ವಾಹನಗಳಿಗಾಗಿರುವ ಹಾನಿಯ ಬಗ್ಗೆಯೂ ಸಹ ವಿಮೆ ಸಮೀಕ್ಷಕರು ಮೌಲ್ಯಮಾಪನ ನಡೆಸುತ್ತಿದ್ದಾರೆ.

ನಷ್ಟವಾದ 357 ಹೊಸ ಕಾರುಗಳ ಮಾರುಕಟ್ಟೆ ಮೌಲ್ಯ ಜಿಎಸ್‍ಟಿ ಸೇರಿದಂತೆ ಒಟ್ಟು 28.75 ಕೋಟಿ ರೂಪಾಯಿಯಾಗಿದೆ. ಅಲ್ಲದೇ ಶೋರೂಮಿನಲ್ಲಿ ಸುಮಾರು 500 ಹೊಸ ಕಾರುಗಳನ್ನು ಶೇಖರಿಸಿ ಇಡಲಾಗಿತ್ತು, ನೀರಿನ ಪ್ರಮಾಣ ಹೆಚ್ಚಾದ ಕಾರಣ ಕೆಲವು ಕಾರುಗಳನ್ನು ಮಾತ್ರ ಸುರಕ್ಷತಾ ಸ್ಥಳಕ್ಕೆ ರವಾನೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

ಈ ಎಲ್ಲಾ ಕಾರುಗಳಲ್ಲಿ ಡ್ಯಾಶ್‍ಬೋರ್ಡ್‍ನವರೆಗೂ ನೀರು ತುಂಬಿದ್ದ ಕಾರಣ ವಿಮಾ ಸಂಸ್ಥೆಯವರು `ಸಿ’ ವಿಭಾಗದಡಿ ಸೇರಿಸಿ ಸಂಪೂರ್ಣ ನಷ್ಟ ಎಂದು ವರದಿ ನೀಡಿದ್ದಾರೆ. ಹೀಗಾಗಿ ವಾಹನಗಳನ್ನು ಕಡಿಮೆ ಬೆಲೆಗೆ ಪುಣೆ, ಜೈಪುರ ಹಾಗೂ ಅಹಮದಾಬಾದಿನ ಗುಜುರಿದಾರರಿಗೆ ಮಾರಲು ಕಂಪೆನಿ ನಿರ್ಧರಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶೋರೂಂ ಅಧಿಕಾರಿಗಳು, ಪ್ರವಾಹದಿಂದ ಸಂಪೂರ್ಣ ಹಾಳಾಗಿರುವ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ. ಅಲ್ಲದೇ ಆ ಕಾರುಗಳ ಮಾರಾಟವನ್ನು ಸಹ ನಿಷೇಧಿಸಲಾಗುತ್ತದೆ. ಅಂತಹ ವಾಹನಗಳು ನಮ್ಮ ಶೋರೂಂಗಳಲ್ಲಿ ಕಾಣಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಕೇರಳ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಮನೋಜ್ ಕುರುಪ್ ಮಾತನಾಡಿ, ಪ್ರವಾಹದಲ್ಲಿ ಹಾನಿಯಾಗಿರುವ ವಾಹನಗಳನ್ನು ಮತ್ತೆ ಶೋರೂಂಗಳಲ್ಲಿ ಮಾರಾಟಕ್ಕೆ ಇಡುವುದಿಲ್ಲ. ವಾಹನಗಳು ವಿಮೆಯ ವಿಧಿಗಳ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಯಾವ ಡೀಲರ್ ಸಹ ಅಂತಹ ವಾಹನಗಳನ್ನು ಮಾರಾಟ ಮಾಡುವುದಿಲ್ಲ. ಕೇರಳದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಲವು ಆಟೋಮೊಬೈಲ್ ಕಂಪನಿಗಳ ಸುಮಾರು 1,000 ಹೊಸ ಕಾರುಗಳು ಹಾಗೂ 7,000 ದಿಂದ 8,000 ಗ್ರಾಹಕರ ಕಾರುಗಳು ಹಾನಿಗೀಡಾಗಿವೆ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *