ರಾಯಚೂರು: ಅವಸರದಲ್ಲಿ ರೈಲು ಹಳಿ ದಾಟಲು ಹೋಗಿ ಮೂರು ಜನ ಯುವಕರು ಪ್ರಾಣ ಕಳೆದುಕೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ವೀರೇಶ್, ಏಸುರಾಜ್, ಆಂಜಿನೇಯಾ ಮೃತಪಟ್ಟ ಯುವಕರು. ಮೃತರೆಲ್ಲಾ ನಗರದ ಕುಲಸುಂಬಿ ಕಾಲೋನಿ ನಿವಾಸಿಗಳಾಗಿದ್ದು 23 ರಿಂದ 27 ವರ್ಷದೊಳಗಿನ ಯುವಕರಾಗಿದ್ದಾರೆ. ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕ್ರಿಸ್ಥ ಉಜ್ಜೀವನ ಕೂಟಗಳ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ವೇಳೆ ರೈಲು ಅಪಘಾತದಲ್ಲಿ ಮೂರು ಜನ ಸ್ನೇಹಿತರು ಸಾವನ್ನಪ್ಪಿದ್ದಾರೆ.
ವೀರೇಶ್ ಎಂಬವರಿಗೆ 15 ದಿನಗಳ ಹಿಂದೆ ಮದುವೆಯಾಗಿತ್ತು. ರಾಯಚೂರಿನಿಂದ ಬೆಂಗಳೂರು ಕಡೆ ಹೊರಟಿದ್ದ ಲಿಂಕ್ ರೈಲಿಗೆ ಮೂವರು ಯುವಕರು ಬಲಿಯಾಗಿದ್ದಾರೆ. ಬೋರವೆಲ್ ಹಾಗೂ ಕೂಲಿ ಕೆಲಸ ಮಾಡುತ್ತಿದ್ದ ಯುವಕರು ಸಂಜೆ ಕೆಲಸ ಮುಗಿಸಿಕೊಂಡು ಕಾರ್ಯಕ್ರಮಕ್ಕೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಈ ಸಂಬಂಧ ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.