ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಕಳ್ಳರ ವದಂತಿ ಹೆಚ್ಚುತ್ತಿದ್ದು, ಅಮಾಯಕರು ಬಲಿಪಶುವಾಗ್ತಿದ್ದಾರೆ. ಗುರುವಾರ ಮಕ್ಕಳ ಕಳ್ಳತನಕ್ಕೆ ಬಂದಿದ್ದಾರೆಂದು ಮೂವರು ಮಹಿಳೆಯರ ಮೇಲೆ ಮುಗಿಬಿದ್ದ ಸಾರ್ವಜನಿಕರು ಹಲ್ಲೆ ನಡೆಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರಿನ ವಡೆರಳ್ಳಿ ಬಳಿಯ ಲಕ್ಷ್ಮೀಪುರ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಈ ಮಹಿಳೆಯರು ಗಲ್ಲಿಗಲ್ಲಿಗಳಲ್ಲಿ ಪ್ರತ್ಯೇಕವಾಗಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ರು. ಮಹಿಳೆಯರನ್ನು ವಿದ್ಯಾರಣ್ಯಪುರ ಪೊಲೀಸರು ಕರೆದೊಯ್ದು ವಿಚಾರಣೆ ನಡೆಸಿದಾಗ, ಬಾಡಿಗೆ ಮನೆ ಹುಡುಕುತ್ತಿದ್ವಿ ಅಂತ ಅಳಲು ತೋಡಿಕೊಂಡಿದ್ದಾರೆ.
ಟ್ಯಾನರಿ ರಸ್ತೆ, ಪುಲಿಕೇಶಿನಗರ, ಶಿವಾಜಿನಗರದಲ್ಲೂ ಮಕ್ಕಳ ಕಳ್ಳರ ವದಂತಿ ಹಬ್ಬಿದ್ದು, ಬಿಹಾರ ಮೂಲದ ವ್ಯಕ್ತಿಯೊಬ್ಬರನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಫ್ರೆಜರ್ ಟೌನ್ ರೈಲ್ವೆ ಟ್ರ್ಯಾಕ್ ಬಳಿ ಮಕ್ಕಳನ್ನು ಅನುಮಾನಾಸ್ಪದವಾಗಿ ಕರೆದೊಯ್ಯುತ್ತಿದ್ರು ಅಂತ ಜನ ಆರೋಪಿಸಿದ್ದಾರೆ. ಅಲ್ಲದೆ ಓರ್ವ ವ್ಯಕ್ತಿ ಮತ್ತು ಜೊತೆಯಲ್ಲಿದ್ದ ಇಬ್ಬರು ಮಹಿಳೆಯನ್ನು ಪುಲಿಕೇಶಿನಗರ ಪೊಲೀಸರಿಗೆ ಒಪ್ಪಿಸಿದ್ದು, ವಿಚಾರಣೆ ಮುಂದುವರಿದಿದೆ.
ಇದು ಬೆಂಗಳೂರಿನ ಕಥೆಯಾದ್ರೆ ಅತ್ತ ಕೋಲಾರದಲ್ಲಿ ಮಕ್ಕಳ ಕಳ್ಳರ ವದಂತಿ ಹಿನ್ನೆಲೆಯಲ್ಲಿ ಭಿಕ್ಷುಕರು, ಚಿಂದಿ ಹಾಯುವವರು ಮತ್ತು ಅನಾಮಿಕರನ್ನು ಹಿಡಿದು ಸ್ಥಳೀಯರು ಥಳಿಸುತ್ತಿದ್ದಾರೆ. ನಗರದಲ್ಲಿ 3 ದಿನದಲ್ಲಿ 6 ಮಂದಿಗೆ ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಪೋಷಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಅಂತ ಹಿರಿಯ ಪೊಲೀಸ್ ಅಧಿಕಾರಿಗಳು ಭರವಸೆ ಕೊಟ್ಟಿದ್ದಾರೆ.
ತುಮಕೂರಿನಲ್ಲಿ ಮಕ್ಕಳ ಕಳ್ಳರು ಮಕ್ಕಳನ್ನು ಅಪಹರಿಸಿ ಕಿಡ್ನಿ, ಹೃದಯ ತೆಗೆದು ಮಾರ್ತಾರೆ ಅನ್ನೋ ವದಂತಿ ಹೆಚ್ಚಿದೆ. ಅದಕ್ಕೆ ಪುಷ್ಠಿ ನೀಡುವಂತೆ ಭಾರತಿ ನಗರ, ಕ್ಯಾತಸಂದ್ರದಲ್ಲಿ ವೃದ್ಧೆಯೊಬ್ಬರು ಬಂದು ಬಾಗಿಲು ಬಡಿದಿದ್ದಾರೆ. ಈ ವೃದ್ಧೆಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದ್ರಿಂದ ತುಮಕೂರಿನ ಜನ ಆತಂಕದಲ್ಲಿ ಬದುಕು ಸಾಗಿಸ್ತಿದ್ದಾರೆ.
https://www.youtube.com/watch?v=KYluolLLiiI