ಕಾರವಾರ: ಜಿಲ್ಲೆಯ ಕಾರವಾರ ನಗರದ ಸವಿತಾ ಹೊಟೇಲ್ ಬಳಿ ದೆಹಲಿ ಮತ್ತು ಜಮ್ಮು ಮೂಲದ ಮೂವರನ್ನ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ರಜಾಕ್ ಅಹ್ಮದ್ ಖಾನ್, ಜುಬೇರ್, ರಫಾಕ್, ಮುಸ್ತಾಕ್ ಬಂಧಿತ ಶಂಕಿತ ಆರೋಪಿಗಳು. ಮೂವರು ದೆಹಲಿಯ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಎನ್ನಲಾಗಿದೆ. ಮೂವರಲ್ಲಿ ಇಬ್ಬರು ದೆಹಲಿಯವರು, ಮತ್ತೋರ್ವ ಜಮ್ಮು ಮೂಲದವನು ಎಂದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ಕಾರವಾರ ಪೊಲೀಸರು ಸ್ಯಾಟ್ಲೈಟ್ ಫೋನ್ ಆಧರಿಸಿ ಯಲ್ಲಾಪುರ ತಾಲೂಕಿನ ಸಮೀಪದ ಅರಣ್ಯದಲ್ಲಿ ಕಾರ್ಯಚರಣೆ ನಡೆಸಿದ್ದರು. ಈ ಸಮಯದಲ್ಲಿ ಕಾರವಾರ ಡಿವೈಎಸ್ಪಿ ಶಂಕರ್ ಮಾರಿಹಾಳ ಹಾಗೂ ಗುಪ್ತಚರ ಇಲಾಖೆಯ ಅಧಿಕಾರಿ ನಾಪತ್ತೆಯಾಗಿದ್ದರು. ನಂತರ ಅಧಿಕಾರಿಗಳನ್ನು ರಕ್ಷಣೆ ಮಾಡಲಾಗಿತ್ತು. ಅಂದು ಅಧಿಕಾರಿಗಳು ಸ್ಯಾಟ್ಲೈಟ್ ಫೋನ್ ಬಳಕೆಯ ಮಾಹಿತಿ ಲಭ್ಯವಾಗದೇ ಬರಿಗೈಯಲ್ಲಿ ಮರಳುವಂತಾಗಿತ್ತು.
ಪೊಲೀಸ್ ಹಾಗೂ ಗುಪ್ತಚರ ವಿಭಾಗದ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದರಿಂದ ಅನುಮಾನಾಸ್ಪದ ಮೇಲೆ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶಂಕಿತ ಆರೋಪಿಗಳಿಂದ ಮೊಬೈಲ್ ಸೇರಿದಂತೆ ಪ್ರಮುಖ ವಸ್ತುಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.