ಚಲಿಸುತ್ತಿದ್ದ ರೈಲಿನಿಂದ 3 ಹೆಣ್ಣುಮಕ್ಕಳನ್ನು ಎಸೆದ ಕ್ರೂರಿ ಚಿಕ್ಕಪ್ಪ

Public TV
1 Min Read

ಲಕ್ನೋ: ಕ್ರೂರಿ ಚಿಕ್ಕಪ್ಪನೊಬ್ಬ ಮೂವರು ಹೆಣ್ಣು ಮಕ್ಕಳನ್ನು ಚಲಿಸುತ್ತಿರುವ ರೈಲಿನಿಂದ ಎಸೆದಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ.

ಇಕ್ಬಾಲ್ ಎಂಬಾತನೇ ಮೂವರು ಮಕ್ಕಳನ್ನು ಚಲಿಸುವ ರೈಲಿನಿಂದ ದೂಡಿದ ಕ್ರೂರಿ ಚಿಕ್ಕಪ್ಪ. ಮೂವರು ಮಕ್ಕಳಲ್ಲಿ ಒಬ್ಬ ಬಾಲಕಿ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮುನ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಲ್‍ಬುಲ್ (12) ಮತ್ತು ಸಲೀಮಾ ಖಾತೂನ್ (4) ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಡೆದಿದ್ದೇನು?: ಈ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಮೂವರು ಹೆಣ್ಣು ಮಕ್ಕಳ ಜೊತೆಯಲ್ಲಿ ತಂದೆ ಇದ್ದು ಮತ್ತು ಚಿಕ್ಕಪ್ಪ ಇಕ್ಬಾಲ್ ಅಮೃತಸರ್-ಸಹರ್‍ಸಾ ಜನ್‍ಸೇವಾ ಎಕ್ಸ್ ಪ್ರೆಸ್ ನಲ್ಲಿ ಬಿಹಾರ್‍ಗೆ ಪ್ರಯಾಣ ಬೆಳಸುತ್ತಿದ್ದರು. ಈ ವೇಳೆ ಸೀತಾಪುರ ಜಿಲ್ಲೆಯಲ್ಲಿ ಮಕ್ಕಳನ್ನು ಚಿಕ್ಕಪ್ಪ ಇಕ್ಬಾಲ್ ಹೊರಗೆ ಎಸೆದಿದ್ದಾನೆ.

ನನ್ನ ತಂದೆ ಮತ್ತು ಚಿಕ್ಕಪ್ಪ ಇಬ್ಬರೂ ರೈಲಿನಲ್ಲಿ ಮದ್ಯಪಾನ ಮಾಡುತ್ತಿದ್ದರು. ಇಬ್ಬರ ನಡುವೆ ಜಗಳ ಸಹ ನಡೆಯಿತು. ಈ ವೇಳೆ ಚಿಕ್ಕಪ್ಪ ನನ್ನ ಸೋದರಿಯನ್ನು ರೈಲಿನಿಂದ ಎಸೆದ ಎಂದು ಗಾಯಗೊಂಡಿರುವ ಅಲ್‍ಬುಲ್ ತಿಳಿಸಿದ್ದಾಳೆ ಎಂದು ಸೀತಾಪುರನ ಆರ್‍ಪಿಎಫ್ ಪೊಲೀಸ್ ಅಧಿಕಾರಿ ಧನಂಜಯ್ ಸಿಂಗ್ ಹೇಳಿದ್ದಾರೆ.

ಮುನ್ನಿಯ ಶವ ಬಿಸ್ವಾನ್ ಪಟ್ಟಣದ 11 ಕಿ.ಮೀ ದೂರದ ರಾಮಯ್ಯಪುರ ಹಾಲ್ಟ್ ರೈಲ್ವೆ ನಿಲ್ದಾಣದ ಬಳಿ ದೊರತಿದೆ. ಅಲ್‍ಬುಲ್ ಮತ್ತು ಸಲೀಮಾ ಇಬ್ಬರೂ ತೀವ್ರವಾಗಿ ಗಾಯಗೊಂಡು ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾಗಿದ್ದಾರೆ.

ಮಕ್ಕಳ ತಂದೆ ಇದ್ದು ಮತ್ತು ಇಕ್ಬಾಲ್ ಇಬ್ಬರೂ ಬಿಹಾರದ ಮೋತಿಹಾರಿ ಜಿಲ್ಲೆಯ ನಿವಾಸಿಗಳಾಗಿದ್ದು, ಪಂಜಾಬ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಘಟನೆ ಬಳಿಕ ನಾಪತ್ತೆಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *