ಚಿಕ್ಕಮಗಳೂರು: ರಸ್ತೆ ಬದಿ ನಿಂತು ಚಿರತೆ ಚರ್ಮ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಇಂದಾವರ ಫ್ಯಾಕ್ಟರಿ ಬಡಾವಣೆಯ ಮಲ್ನಾಡ್ ಸಮುದಾಯ ಭವನದ ಬಳಿ ಬಂಧಿಸಲಾಗಿದೆ. ಬಂಧಿತರನ್ನು ಇಂದಾವರ ಗ್ರಾಮದ ಪರ್ವತ, ಎಪಿಎಂಸಿ ಮಾರ್ಕೆಟ್ನಲ್ಲಿ ರೈಟರ್ ಕೆಲಸ ಮಾಡುವ ಕಾಂತರಾಜ್ ಹಾಗೂ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಶ್ರೀನಿವಾಸ್ ಎಂದು ಗುರುತಿಸಲಾಗಿದೆ.
ಬಂಧಿತರು ಚಿರತೆ ಚರ್ಮವನ್ನು ಕಳೆದ ವರ್ಷವೇ ಮರಣ ಹೊಂದಿದ ಓರ್ವ ವ್ಯಕ್ತಿಯಿಂದ ಖರೀದಿಸಿದ್ದರು ಎಂದು ಹೇಳಲಾಗಿದೆ. ಅಂದಿನಿಂದಲೂ ಚಿರತೆ ಚರ್ಮವನ್ನು ಮಾರಾಟ ಮಾಡಲು ಗಿರಾಕಿಗಳಿಗಾಗಿ ಹುಡುಕಾಡುತ್ತಿದ್ದರು. ಆದರೆ, ಗಿರಾಕಿಗಳೂ ಯಾರೂ ಸಿಕ್ಕಿರಲಿಲ್ಲ. ಇದೀಗ, ರಸ್ತೆಬದಿಯಲ್ಲಿ ನಿಂತು ಗಿರಾಕಿಗಳಿಗಾಗಿ ಕಾಯುವಾಗ ಖಚಿತ ಮಾಹಿತಿ ಮೇರೆಗೆ ನಗರದ ಅರಣ್ಯ ಸಂಚಾರಿ ದಳದ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಈ ಕಾರ್ಯಾಚರಣೆಗೆ ಮಡಿಕೇರಿ ಅರಣ್ಯ ಘಟಕದ ಎಸ್ಪಿ ಚಂದ್ರಕಾಂತ್ ಮಾರ್ಗದರ್ಶನದಲ್ಲಿ ನಗರದ ಪೊಲೀಸ್ ಅರಣ್ಯ ಸಂಚಾರಿ ದಳದ ಸಬ್ಇನ್ಸ್ಪೆಕ್ಟರ್ ಶರತ್, ಸಿಬ್ಬಂದಿಗಳಾದ ಹೆಚ್.ದೇವರಾಜ್, ಡಿ.ಎಚ್.ದಿನೇಶ್, ಎಸ್.ಕೆ.ದಿವಾಕರ್, ಕೆ.ಎಸ್.ದಿಲೀಪ್, ಹಾಲೇಶ್, ಹೇಮಾವತಿ, ತಿಮ್ಮಶೆಟ್ಟಿಯವರು ಪಾಲ್ಗೊಂಡಿದ್ದರು. ಬಂಧಿತರಿಂದ ಚಿರತೆ ಚರ್ಮವನ್ನ ವಶಪಡಿಸಿಕೊಳ್ಳಲಾಗಿದೆ.