ಬೆಂಗಳೂರಿನಲ್ಲಿ ಮೂವರು ಪಾಕಿಸ್ತಾನಿ ಪ್ರಜೆಗಳು ಅರೆಸ್ಟ್

Public TV
1 Min Read

– ಬಂಧಿತರ ಬಳಿ ಇತ್ತು ಆಧಾರ್, ವೋಟರ್ ಐಡಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೆಲೆಸಿದ್ದ ಮೂವರು ಪಾಕಿಸ್ತಾನಿ ಪ್ರಜೆಗಳು ಮತ್ತು ಓರ್ವ ಕೇರಳ ಮೂಲದ ವ್ಯಕ್ತಿಯನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.

ಸಮೀರಾ ಅಬ್ದುಲ್ ರೆಹಮಾನ್, ಕಿರೋನ್ ಗುಲಾಂ ಅಲಿ, ಖಾಸೀಫ್ ಶಂಶುದ್ದೀನ್ ಪಾಕ್ ಪ್ರಜೆಗಳಾಗಿದ್ದರೆ, ಮೊಹಮ್ಮದ್ ಶಿಹಾಬ್ ಕೇರಳ ಮೂಲದ ವ್ಯಕ್ತಿಯಾಗಿದ್ದಾನೆ. ಕಳೆದ ಎರಡು ತಿಂಗಳಿನಿಂದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಇವರ ಬಳಿ ಆಧಾರ್ ಮತ್ತು ವೋಟರ್ ಐಡಿ ದಾಖಲೆಗಳು ಇರುವುದು ಪತ್ತೆಯಾಗಿದೆ.

ಪಾಕಿಸ್ತಾನದಿಂದ ಬಹರೇನ್ ತೆರಳಿ ಅಲ್ಲಿಂದ ನೇಪಾಳಕ್ಕೆ ಬಂದು ಭಾರತನ್ನು ಇವರು ಪ್ರವೇಶಿಸಿದ್ದಾರೆ ಎನ್ನುವ ಮಾಹಿತಿ ಈಗ ಸಿಕ್ಕಿದೆ.

ಸಿಕ್ಕಿ ಬಿದ್ದಿದ್ದು ಹೇಗೆ?
ಕುಮಾರಸ್ವಾಮಿ ಲೇಔಟ್ ನಲ್ಲಿ ನೆಲೆಸಿದ್ದ ಇವರ ಚಲನವಲನಗಳು ಸ್ವಲ್ಪ ಅನುಮಾನ ಮೂಡಿಸುತ್ತಿತ್ತು. ಅನುಮಾನ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಅನ್ವಯ ಕಳೆದ 15 ದಿನಗಳಿಂದ ಪೊಲೀಸರು ಈ ನಾಲ್ವರ ಚಲನವಲನದ ಮೇಲೆ ಒಂದು ಕಣ್ಣನ್ನು ಇಟ್ಟಿದ್ದರು. ಚಲನವಲನದ ಮೇಲೆ ಸಂಶಯ ಮೂಡಿದ ಹಿನ್ನೆಲೆಯಲ್ಲಿ ಪೊಲೀಸರು ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಎಲ್ಲ ವಿಚಾರಗಳು ಈಗ ಬೆಳಕಿಗೆ ಬಂದಿದೆ. ಈಗ ಸಿಕ್ಕಿರುವುದು ಪ್ರಾಥಮಿಕ ಮಾಹಿತಿಯಾಗಿದ್ದು, ಬಂಧಿತರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು ಮತ್ತಷ್ಟು ಮಾಹಿತಿ ಸಿಗುವ ಸಾಧ್ಯತೆಯಿದೆ.

ಬಂಧಿತರಿಗೆ ಕೇರಳ ಮೂಲದ ವ್ಯಕ್ತಿಯ ಪರಿಚಯವಾಗಿದ್ದು ಹೇಗೆ? ಅಷ್ಟೇ ಅಲ್ಲದೇ ಭಾರತಕ್ಕೆ ಬಂದ ಎರಡೇ ತಿಂಗಳಿನಲ್ಲಿ ಇವರಿಗೆ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಸಿಕ್ಕಿದ್ದು ಹೇಗೆ ಎನ್ನುವ ಪ್ರಶ್ನೆಗೆ ವಿಚಾರಣೆ ವೇಳೆ ಉತ್ತರ ಸಿಗಲಿದೆ.

ಭಾರತದ ಮಹಾನಗರಗಳ ಮೇಲೆ ಪಾಕಿಸ್ತಾನಿ ಉಗ್ರರು ದಾಳಿ ನಡೆಸಲು ಸಿದ್ಧತೆ ನಡೆಸಲು ನಡೆಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ಈ ಹಿಂದೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬಂಧಿತರಿಗೆ ಉಗ್ರರ ಜೊತೆಗೆ ನಂಟು ಇದೆಯಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *