ಮೂವರು ಕಾಮುಕರ ಲೈಂಗಿಕ ಕಿರುಕುಳ ತಾಳಲಾರದೇ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅಪ್ರಾಪ್ತೆ!

Public TV
1 Min Read

ಉಡುಪಿ: ಕುಂದಾಪುರ ತಾಲೂಕಿನ ಅಮಾಸೆಬೈಲುವಿನಲ್ಲಿ ಕಾಮುಕರ ಲೈಂಗಿಕ ಕಿರುಕುಳ ತಾಳಲಾರದೇ ಅಪ್ರಾಪ್ತ ಬಾಲಕಿಯೊಬ್ಬಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವಂತೆ ಪ್ರಸಾದ್ ಹೆಗ್ಡೆ, ಪ್ರಶಾಂತ್ ಹೆಗ್ಡೆ, ವಿನಯ್ ಶೆಟ್ಟಿ ಒತ್ತಡ ಹೇರುತ್ತಿದ್ದರು. ಮೂರ್ನಾಲ್ಕು ತಿಂಗಳು ಹಿಂದೆ ತೀವ್ರ ಒತ್ತಡ ಇತ್ತು ಎನ್ನಲಾಗಿದೆ. ಒತ್ತಡದಿಂದ ಬೇಸತ್ತ ಬಾಲಕಿ ಜೂನ್ 2ರಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಇಲಿ ಪಾಷಾಣ ಸೇವಿಸಿದ್ದರಿಂದ ಆಕೆಯ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿದೆ.

ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂವರು ಯುವಕರು ತಾವು ಹೇಳಿದ ಒಂದು ಜಾಗಕ್ಕೆ ಬರುವಂತೆ ಒತ್ತಾಯ ಮಾಡಿದ್ದರು. ಅಲ್ಲಿಗೆ ಬಾರದೇ ಇದ್ದರೆ ತಂದೆ ತಾಯಿಗೆ ತೊಂದರೆ ಮಾಡುತ್ತೇವೆ ಎಂದು ಬೆದರಿಸಿದ್ದರು ಎಂದು ಬಾಲಕಿ ದೂರಿದ್ದಾಳೆ. ಇದರಿಂದ ಹೆದರಿ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ.

ಸಂತ್ರಸ್ಥೆ ಅಮಾಸೆಬೈಲಿನಿಂದ ಹೆಬ್ರಿಗೆ ಟೈಲರಿಂಗ್ ಕ್ಲಾಸಿಗೆ ಹೋಗುತ್ತಿದ್ದಾಗ ಯುವಕರು ಬೆನ್ನಟ್ಟುತ್ತಿದ್ದರು. ಬಸ್ಸಿನಲ್ಲಿ ತೆರಳಿ ಕಿರುಕುಳ ನೀಡುತ್ತಿದ್ದರು. ಫೋನ್ ಮೆಸೇಜ್ ಮಾಡಿ ಲವ್ ಮಾಡುವಂತೆ ಒತ್ತಾಯ ಮಾಡುತ್ತಿದ್ದರು. ಕಿರುಕುಳ ಹೆಚ್ಚಾಗುತ್ತಿದ್ದಂತೆ ಸಂತ್ರಸ್ಥೆ ಪೋಷಕರಲ್ಲಿ ದೂರಿದ್ದಳು. ಸಮಸ್ಯೆ ಸರಿಯಾಗಬಹುದು ಎನ್ನವಷ್ಟರಲ್ಲಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ.

ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಂತ್ರಸ್ಥೆಯಿಂದ ಮಾಹಿತಿ ಪಡೆದಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಚನೆ ಮಾಡಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *