ನೀರು ಕುಡಿಯಲು ಬಂದು ಕೆರೆಯಲ್ಲೇ ರಾತ್ರಿ ಕಳೆದ ತಾಯಿ-ಮರಿಯಾನೆಗಳು

Public TV
1 Min Read

ಮಡಿಕೇರಿ: ಕಾಡಲ್ಲಿ ನೀರು ಸಿಗದೆ ಮೂರು ಆನೆಗಳು ನಾಡಿನತ್ತ ಬಂದಿವೆ. ಕೆರೆಯಲ್ಲಿದ್ದ ನೀರು ನೋಡಿ ಕುಡಿಯಲು ಹೋಗಿ ಅಲ್ಲೇ ಒಂದು ರಾತ್ರಿ ಕಳೆದಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಚೇಲಾವರ ಸಮೀಪದ ಚೆಯ್ಯಂಡಾನೆ ಗ್ರಾಮದಲ್ಲಿ ನಡೆದಿದೆ.

ಬಿಸಿಲಿನ ಬೇಗೆ ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಕಾಡುಗಳಲ್ಲಿ ನೀರಿಲ್ಲದೆ ಕಾಡು ಪ್ರಾಣಿಗಳು ಅನುಭವಿಸುತ್ತಿರುವ ಯಾತನೆ ಹೇಳತೀರದಾಗಿದೆ. ಮೂರು ಆನೆಗಳು ಬಾಯಾರಿಕೆ ತಡೆದುಕೊಳ್ಳಲಾಗದೇ ನೀರನ್ನ ಹುಡುಕಿಕೊಂಡು ನಾಡಿಗೆ ಬಂದಿವೆ. ಈ ವೇಳೆ ಅವುಗಳು ಕೆರೆಯಲ್ಲಿ ನೀರು ಕಂಡು ಕುಡಿಯಲು ಕೆಳಗೆ ಇಳಿದಿವೆ. ಆದರೆ ನೀರು ಕುಡಿದ ಮೇಲೆ ಬರಲಾದರೆ ಅಲ್ಲೇ ಸಿಲುಕಿಕೊಂಡಿವೆ. ಬುಧವಾರ ರಾತ್ರಿ ಕೆರೆಯಲ್ಲಿ ಬಿದ್ದ ಮೂರು ಕಾಡಾನೆಗಳು ಎಷ್ಟೇ ಪ್ರಯತ್ನಪಟ್ಟರೂ ಮೇಲೆ ಬರಲಾರದೇ ಇದೇ ಕೆರೆಯಲ್ಲಿ ಸೆರೆಯಾಗಿದ್ದವು ಎಂದು ಗ್ರಾಮಸ್ಥ ಲೋಕೆಶ್ ಹೇಳಿದ್ದಾರೆ.

ಚೇಲಾವರ ಸುತ್ತಮುತ್ತ ಆರು ಕಾಡಾನೆಗಳು ಬೀಡುಬಿಟ್ಟಿದ್ದು, ಅದರಲ್ಲಿ ತಾಯಿ ಜೊತೆ ಬಂದಿದ್ದ ಎರಡು ಮರಿಯಾನೆಗಳು ಕೆರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದವು. ರಾತ್ರಿಯೇ ವಿಚಾರ ತಿಳಿದು ಕಾಡಾನೆಗಳನ್ನ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆತ್ತಲು ಹರಸಾಹಸ ಪಡುವಂತಾಯಿತು. ಕೊನೆಗೆ ಜೆಸಿಬಿ ತರಿಸಿ ಕೆರೆಯ ದಡದಲ್ಲಿ ದಾರಿಯನ್ನ ಮಾಡಿ ಕಾಡಾನೆಗಳು ಮರಳಿ ಕಾಡಿಗೆ ಹೋಗಲು ಅನುವು ಮಾಡಿಕೊಡಲಾಯಿತು ಎಂದು ಅರಣ್ಯಾಧಿಕಾರಿ ರೋಷಣಿ ತಿಳಿಸಿದ್ದಾರೆ.

ರಾತ್ರಿಯಿಡೀ ಕಾಡಿನ ಆನೆಗಳು ಊರಲ್ಲಿ ವಾಸ್ತವ್ಯ ಹೂಡಿದ್ದರಿಂದ ಗ್ರಾಮಸ್ಥರು ಆತಂಕದಲ್ಲೇ ರಾತ್ರಿ ಕಳೆಯುವಂತಾಗಿತ್ತು. ಕೆರೆಯಲ್ಲಿ ಸಿಲುಕಿಕೊಂಡಿದ್ದ ಕಾಡಾನೆಗಳ ರಕ್ಷಣೆಗೆ ಉಳಿದ ಆನೆಗಳು ಕಾಡಿನಂಚಿನಲ್ಲಿ ಬಂದು ಘೀಳಿಡುತ್ತಿದ್ದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *