ಹಳ್ಳಕ್ಕೆ ಉರುಳಿ ಬಿತ್ತು ಟ್ರ್ಯಾಕ್ಟರ್ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮೂವರು ಬಲಿ

Public TV
1 Min Read

ಮಂಡ್ಯ: ಕಲ್ಲುತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ಚಾಲಕ ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆ ಶ್ರೀರಂಗಪಟ್ಟಣ ತಾಲುಕಿನ ನೇರಳೆಕೆರೆ ಗ್ರಾಮದ ಬಳಿ ನಡೆದಿದೆ.

ಟ್ರ್ಯಾಕ್ಟರ್ ಚಾಲಕ ಪ್ರಸನ್ನ, ದೊಡ್ಡಪಾಳ್ಯ ಗ್ರಾಮದ ಪ್ರವೀಣ್ ಮತ್ತು ಹಂಗರಹಳ್ಳಿ ಗ್ರಾಮದ ನಿಖಿಲ್ ಮೃತ ದುರ್ದೈವಿಗಳು. ಹಂಗರಹಳ್ಳಿ ಕ್ವಾರಿಯಿಂದ ಯಾಚೇನಹಳ್ಳಿ ಗ್ರಾಮಕ್ಕೆ ಕಲ್ಲುಗಳನ್ನು ತುಂಬಿಕೊಂಡು ಹೋಗುತ್ತಿತ್ತು. ಈ ವೇಳೆ ಟ್ರ್ಯಾಕ್ಟರ್ ಕೆರೆ ಏರಿಯ ತಿರುವಿನಲ್ಲಿ 20 ಅಡಿ ಕೆಳಕ್ಕೆ ಮಗುಚಿ ಬಿದ್ದಿದೆ. ಪರಿಣಾಮ ಟ್ರ್ಯಾಕ್ಟರ್ ಚಾಲಕ ಪ್ರಸನ್ನ, ಪ್ರವೀಣ್ ಹಾಗೂ ನಿಖಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನೇರಳೇಕೆರೆ ಗ್ರಾಮದ ಬಳಿ ಕೆರೆಯ ಏರಿಯ ರಸ್ತೆ ತುಂಬ ಕಿರಿದಾಗಿದ್ದು, ರಸ್ತೆಯನ್ನು ದುರಸ್ಥಿಗೊಳಿಸುವಂತೆ ಸ್ಥಳೀಯರು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಸ್ಥಳೀಯರ ಮನವಿಗೆ ಸ್ಪಂದಿಸದ ಅಧಿಕಾರಿಗಳು ರಸ್ತೆಯ ಕಾಮಗಾರಿಗೆ ಗಮನ ಹರಿಸಿರಲಿಲ್ಲ. ಆದ್ದರಿಂದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇದೀಗ ಟ್ರ್ಯಾಕ್ಟರ್ ಉರುಳಿ ಬಿದ್ದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಘಟನೆ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *