ನಾಮಪತ್ರ ಸಲ್ಲಿಸಿ ಹಿಂದಿರುಗುವಾಗ ಟಾಟಾ ಏಸ್ ಪಲ್ಟಿ – ಮೂವರ ದುರ್ಮರಣ

Public TV
1 Min Read

ಚಿಕ್ಕಮಗಳೂರು: ನಾಯಕರ ನಾಮಪತ್ರ ಸಲ್ಲಿಸಿ ತಮ್ಮ ಹಳ್ಳಿಗೆ ಹಿಂದಿರುಗುವಾಗ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಗಾಡಿ ಪಲ್ಟಿಯಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಹುಣಸಘಟ್ಟ ಗೇಟ್ ಬಳಿ ನಡೆದಿದೆ.

ಜಲಧಿಹಳ್ಳಿ ನಿವಾಸಿಗಳಾದ ಆಂಜನೇಯ, ಸುರೇಶ್ ಹಾಗೂ ಆನಂದ ಮೃತ ದುರ್ದೈವಿಗಳು. ಇವರು ಅಭ್ಯರ್ಥಿ ಡಿ.ಎಸ್.ಸುರೇಶ್ ಬೆಂಬಲಿಗರು. ಸೋಮವಾರ ತರೀಕೆರೆಯ ಬಿಜೆಪಿ ಅಭ್ಯರ್ಥಿ ಡಿ.ಎಸ್.ಸುರೇಶ್ ನಾಮಪತ್ರ ಸಲ್ಲಿಸಿದ್ದರು. ನಂತರ ಹಳ್ಳಿಗೆ ಹಿಂದಿರುಗುವಾಗ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಗಾಡಿ ಪಲ್ಟಿಯಾಗಿದೆ. ಪರಿಣಾಮ ಸುರೇಶ್ ಗೆ ಬೆಂಬಲ ವ್ಯಕ್ತಪಡಿಸಲು ಬಂದಿದ್ದ ಆಂಜನೇಯ, ಸುರೇಶ್ ಹಾಗೂ ಆನಂದ ಮಧ್ಯವಯಸ್ಸಿನ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಾಡಿಯಲ್ಲಿದ್ದ ಒಟ್ಟು ಎಂಟು ಜನರು ಇದ್ದರು. ಅವರಲ್ಲಿ ಮೂವರು ಮೃತಪಟ್ಟಿದ್ದಾರೆ. ಇನ್ನು ಐವರಿಗೆ ಗಾಯವಾಗಿದ್ದು, ಇವರಲ್ಲಿ ಮೂವರಿಗೆ ಗಂಭೀರವಾಗಿ ಗಾಯವಾಗಿದೆ. ಗಾಯಾಳುಗಳನ್ನ ಸಮೀಪದ ತರೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಅಜ್ಜಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *