ಬಳ್ಳಾರಿ: ಬಳ್ಳಾರಿ ಹೊರವಲಯದ ಅಲ್ಲಿಪುರ ಬಳಿ ಶನಿವಾರ ರಾತ್ರಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶ್ರೀನಿವಾಸ್, ವೀಣಾ ಮತ್ತು ಮಗ ಸಂತೋಷ್ ಮೃತ ದುರ್ದೈವಿಗಳು. ಹೊಸಪೇಟೆಯಿಂದ ಬಳ್ಳಾರಿ ಕಡೆ ಕಾರ್ ಬರುತ್ತಿತ್ತು. ಈ ವೇಳೆ ಅಲ್ಲಿಪುರ ದ ಬಳಿ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ, ಬೈಕಿನಲ್ಲಿದ್ದ ಪತಿ ಶ್ರೀನಿವಾಸ್, ಪತ್ನಿ ವೀಣಾ ಹಾಗೂ ಮಗ ಸಂತೋಷ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ತಮಗೆ ಗೊತ್ತಿರುವವರು ತಮ್ಮ ಕಣ್ಣೆದುರೇ ಸಾವನ್ನಪ್ಪಿದ ದೃಶ್ಯ ಕಂಡ ಸ್ಥಳೀಯರು, ಕಾರನ್ನು ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿ ಕೆಲಕಾಲ ಪ್ರತಿಭಟನೆ ಮಾಡಿದ್ದಾರೆ. ನಂತರ ಸ್ಥಳಕ್ಕೆ ಸಂಚಾರಿ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಬಳ್ಳಾರಿ ಎಸ್ಪಿ ಅರುಣ್ ರಂಗರಾಜನ್ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ಶ್ರೀನಿವಾಸ್ ಮತ್ತು ವೀಣಾ ಖಾಸಗಿ ಆಸ್ಪತ್ರೆಯಲ್ಲಿ ಕಳೆದ 3 ದಶಕದಿಂದ ಮೆಡಿಕಲ್ ವಿಭಾಗ ಮತ್ತು ವೈದ್ಯಕೀಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕಾರು ವೇಣಿ ವೀರಾಪುರ ಗ್ರಾಮಕ್ಕೆ ಸೇರಿದ್ದಾಗಿದೆ. ಕಾರಿನಲ್ಲಿದ್ದ ಓರ್ವ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದಾರೆ.
ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.