ಕಾಂಗ್ರೆಸ್ಸಿಗೆ ಈಗ ಗುಜರಾತ್‍ನಲ್ಲಿ ಕೈ ಶಾಸಕರಿಂದಲೇ ಶಾಕ್

Public TV
2 Min Read

ಗಾಂಧಿನಗರ: ಬಿಹಾರದಲ್ಲಿ ನಿತೀಶ್ ಕುಮಾರ್ ದಿಢೀರ್ ಆಗಿ ಬುಧವಾರ ಸಂಜೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್ಸಿಗೆ ಶಾಕ್ ನೀಡಿದ್ದರೆ, ಈಗ ಗುಜರಾತ್‍ನಲ್ಲಿ ಸ್ವಪಕ್ಷೀಯರೇ ನಾಯಕರಿಗೆ ಶಾಕ್ ನೀಡಿದ್ದಾರೆ.

ಹಿರಿಯ ಮುಖಂಡ ಶಂಕರ್ ಸಿಂಗ್ ವಘೇಲಾ ಅವರು ಕಾಂಗ್ರೆಸ್ಸಿಗೆ ರಾಜಿನಾಮೆ ನೀಡಿದ ಬೆನ್ನಲ್ಲೇ ಇದೀಗ ಮೂವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ವಘೇಲಾ ಅವರ ಹತ್ತಿರ ಸಂಬಂಧಿ ಬಲವಂತ್ ಸಿಂಗ್ ರಜಪೂತ್, ತೇಜಶ್ರೀ ಪಟೇಲ್, ಪಿಐ ಪಟೇಲ್ ರಾಜೀನಾಮೆ ನೀಡಿ ಕಮಲ ಪಡೆಯನ್ನು ಸೇರಿಕೊಂಡಿದ್ದಾರೆ.

ಆಗಸ್ಟ್ 8 ರಂದು ರಾಜ್ಯಸಭಾ ಚುನಾವಣೆ ನಡೆಯಲಿದ್ದು ಈ ನಡುವೆ ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಿರುವುದು ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ಅವರ ಮರು ಆಯ್ಕೆಗೆ ಕಷ್ಟವಾಗಲಿದೆ. ತೆರವಾಗುತ್ತಿರುವ ಮೂರು ಸ್ಥಾನಗಳ ಪೈಕಿ ಎರಡರಲ್ಲಿ ಬಿಜೆಪಿ ಸುಲಭವಾಗಿ ಜಯಗಳಿಸಲಿದ್ದು, ಈಗಾಗಲೇ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ 11 ಕೈ ಶಾಸಕರು ಕೋವಿಂದ್ ಅವರಿಗೆ ವೋಟ್ ಹಾಕಿದ ಕಾರಣ ಅಹ್ಮದ್ ಪಟೇಲ್ ಅವರು ರಾಜ್ಯಸಭೆಗೆ ಮತ್ತೊಮ್ಮೆ ಆಯ್ಕೆ ಆಗುತ್ತಾರಾ ಇಲ್ಲವೋ ಎನ್ನುವ ಪ್ರಶ್ನೆ ಈಗ ಎದ್ದಿದೆ.

ಒಟ್ಟು 182 ಶಾಸಕರನ್ನು ಹೊಂದಿರುವ ಗುಜರಾತ್ ನಲ್ಲಿ 57 ಮಂದಿ ಕಾಂಗ್ರೆಸ್ ಶಾಸಕರು ಇದ್ದಾರೆ. ಎನ್‍ಸಿಪಿ ಇಬ್ಬರು ಶಾಸಕರು ಮತ್ತು ಜೆಡಿಯು ಒಬ್ಬರು ಶಾಸಕರು ಅಹ್ಮದ್ ಪಟೇಲ್ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ರಾಜ್ಯಸಭೆಗೆ ಆಯ್ಕೆ ಆಗಲು ಅಹ್ಮದ್ ಪಟೇಲ್ ಅವರಿಗೆ ಕನಿಷ್ಟ 47 ಮತಗಳು ಬೇಕು. ಹೀಗಾಗಿ ಈಗಾಗಲೇ ಅಡ್ಡಮತದಾನ ಮಾಡಿರುವ 11 ಶಾಸಕರ ಜೊತೆಗೆ ಮತ್ತಷ್ಟು ಕೈ ಶಾಸಕರು ಸೇರ್ಪಡೆಯಾದರೆ ಅಹ್ಮದ್ ಪಟೇಲ್ ಅವರಿಗೆ ರಾಜ್ಯಸಭಾ ಸದಸ್ಯ ಸ್ಥಾನ ಕೈ ತಪ್ಪುವ ಸಾಧ್ಯತೆಯಿದೆ.

ತನ್ನ 77ನೇ ಹುಟ್ಟುಹಬ್ಬದ ದಿನವೇ ಗುಜರಾತ್‍ನ ಹಿರಿಯ ನಾಯಕ ಶಂಕರ್ ಸಿಂಗ್ ವಘೇಲಾ ಬಹಿರಂಗವಾಗಿ ಬಂಡಾಯದ ಬಾವುಟ ಹಾರಿಸಿ ಕಾಂಗ್ರೆಸ್ ಹಾಗೂ ಗುಜರಾತ್ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಡಿಸೆಂಬರ್ ನಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ.

Share This Article
Leave a Comment

Leave a Reply

Your email address will not be published. Required fields are marked *