ರಾಜೀವ್‌ ಗಾಂಧಿಗೆ ಆದ ಗತಿ ನಿಮಗೂ ಆಗುತ್ತೆ – ಮೋದಿಗೆ ಆತ್ಮಹುತಿ ಬಾಂಬ್‌ ದಾಳಿ ಬೆದರಿಕೆ

Public TV
1 Min Read

ನವದೆಹಲಿ: ಪ್ರಧಾನಿ ಮೋದಿ (Narendra Modi) ಏ.24 ರಂದು ಕೇರಳ (Kerala) ಪ್ರವಾಸ ಕೈಗೊಳ್ಳಲಿದ್ದಾರೆ. ಮೋದಿ ಕೊಚ್ಚಿ ಪ್ರವಾಸ ವೇಳೆ ಆತ್ಮಾಹುತಿ ದಾಳಿ ನಡೆಸೋದಾಗಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಹೀಗಾಗಿ ಖಾಕಿ ಹೈ ಅಲರ್ಟ್ ಆಗಿದ್ದಾರೆ.

ಕಳೆದ ವಾರ ತಿರುವನಂತಪುರಂ ಬಿಜೆಪಿ ಕಚೇರಿಗೆ ಈ ಬೆದರಿಕೆ ಪತ್ರ ಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ ಕೇರಳದಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ. ರಾಜ್ಯಾದ್ಯಂತ ಬಿಗಿಭದ್ರತೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಪ್ರಾಣ ನೀಡಲು ಸಿದ್ಧನಿದ್ದೇನೆ ಆದ್ರೆ ದೇಶ ವಿಭಜಿಸಲು ಬಿಡಲ್ಲ: ಮಮತಾ ಬ್ಯಾನರ್ಜಿ

ಕೊಚ್ಚಿಯಲ್ಲಿರುವ ವ್ಯಕ್ತಿಯೊಬ್ಬರು ಮಲಯಾಳಂ ಭಾಷೆಯಲ್ಲಿ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರ ಕಚೇರಿಯಲ್ಲಿ ಸ್ವೀಕರಿಸಲಾಗಿದ್ದು, ಅವರು ಕಳೆದ ವಾರ ಅದನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಭದ್ರತಾ ಏಜೆನ್ಸಿಗಳು ತನಿಖೆ ಆರಂಭಿಸಿವೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಭವಿಷ್ಯವನ್ನು ಮೋದಿ ಎದುರಿಸಲಿದ್ದಾರೆ ಎಂದು ಪತ್ರದಲ್ಲಿ ಬರೆದಿತ್ತು. ವಿಳಾಸ ಹೊಂದಿದ್ದ ಎನ್.ಕೆ.ಜಾನಿ ಎಂಬ ವ್ಯಕ್ತಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಕೊಚ್ಚಿ ಮೂಲದ ಜಾನಿ ಪತ್ರ ಬರೆದಿರುವುದನ್ನು ಅಲ್ಲಗಳೆದಿದ್ದಾನೆ. ತನ್ನ ವಿರುದ್ಧ ದ್ವೇಷ ಸಾಧಿಸಿದ ವ್ಯಕ್ತಿಯೇ ಈ ರೀತಿ ಬೆದರಿಕೆ ಪತ್ರ ಬರೆದು ನನ್ನ ಮೇಲೆ ಸಂಶಯ ಬರುವಂತೆ ಮಾಡಿರಬಹುದು ಎಂದು ಪೊಲೀಸರಿಗೆ ಜಾನಿ ತಿಳಿಸಿದ್ದಾನೆ. ಇದನ್ನೂ ಓದಿ: 2005ರಿಂದ ವಾಸವಿದ್ದ ಸರ್ಕಾರಿ ಬಂಗಲೆ ತೊರೆದ ರಾಹುಲ್ ಗಾಂಧಿ

ಈ ಕುರಿತು ಪ್ರತಿಕ್ರಿಯಿಸಿರುವ ಜಾನಿ, ಪೊಲೀಸರು ನನ್ನ ಕೈಬರಹದೊಂದಿಗೆ ಪತ್ರವನ್ನು ತೆಗೆದುಕೊಂಡು ಹೋಗಿದ್ದಾರೆ. ನಾನು ಪತ್ರ ಬರೆದಿಲ್ಲ ಎಂಬುದು ಅವರಿಗೆ ಮನವರಿಕೆಯಾಗಿದೆ. ನನ್ನ ವಿರುದ್ಧ ದ್ವೇಷ ಹೊಂದಿರುವ ಯಾರೋ ಈ ರೀತಿ ಪತ್ರ ಬರೆದಿರಬಹುದು. ನನಗೆ ಅನುಮಾನವಿರುವ ವ್ಯಕ್ತಿಗಳ ಹೆಸರನ್ನು ಪೊಲೀಸರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾನೆ.

Share This Article