ಬಿಗ್ ಬಾಸ್ ಮನೆಯಿಂದ ಹೊರಬಂದ್ಮೇಲೆ ಹೀಗಿದೆ ದಿವಾಕರ್ ಲೈಫ್!

Public TV
2 Min Read

ಬೆಂಗಳೂರು: ಬಿಗ್ ಬಾಸ್ ಎನ್ನುವ ಬಿಗ್ ರಿಯಾಲಿಟಿ ಕಾರ್ಯಕ್ರಮದಲ್ಲಿ ಒಬ್ಬ ಕಾಮನ್‍ಮ್ಯಾನ್ ಆಗಿ ದಿವಾಕರ್ ಮನೆಯೊಳಗೆ ಹೋಗಿದ್ದರು. ಆದರೆ ದಿವಾಕರ್ ಬರುವಾಗ ಸೆಲೆಬ್ರಿಟಿ ಆಗಿ ಹೊರಗೆ ಬಂದರು. ಸೆಮಿಫೈನಲಿಸ್ಟ್ ಆಗಿ ಹೊರಹೊಮ್ಮಿದ ದಿವಾಕರ್ ಗೆ ಅವಕಾಶಗಳ ಸುರಿಮಳೆ ಬರುತ್ತೆ ಎಂದು ಊಹಿಸಲಾಗಿತ್ತು. ಆದರೆ ದಿವಾಕರ್ ಬಾಳಲ್ಲಿ ಅದೃಷ್ಟದೇವಿಯ ಆಗಮನ ಆಗಲೇ ಇಲ್ಲ.

ದಿವಾಕರ್ ಟ್ಯಾಲೆಂಟ್ ನೋಡಿ ಹಲವು ನಿರ್ಮಾಪಕರು ಮನೆ ಮುಂದೆ ಕ್ಯೂ ನಿಲ್ಲಬಹುದೇನೋ ಎನ್ನುವುದು ಎಲ್ಲರ ಆಲೋಚನೆಯಾಗಿತ್ತು. ಆದರೆ ಸದ್ಯಕ್ಕಿರೋದು ಒಂದೇ ಒಂದು ಪ್ರಾಜೆಕ್ಟ್. ಅಂದುಕೊಂಡಂಗೆಲ್ಲಾ ಆಗಿದ್ದರೆ ದಿವಾಕರ್ ಗೆ ಈಗ ಕೈತುಂಬಾ ಕೆಲಸ ಇರಬೇಕಿತ್ತು. ಆದ್ರೆ ಇರೋ ಒಬ್ಬ ಮಗನನ್ನ ಚೆನ್ನಾಗಿ ನೋಡಿಕೊಳ್ಳಬೇಕು, ಹೆಂಡತಿಯನ್ನ ಖುಷಿಯಾಗಿ ಇಡಬೇಕು ಎನ್ನುವ ಆಸೆ ಹೊತ್ತ ಕಂಗಳು ಮತ್ತದೇ ಸೇಲ್ಸ್ ಅಂಗಡಿ ಕಡೆ ತಿರುಗಿನೋಡುವಂತಾಗಿದೆ. ಮೊದಲು ಯಾವ ಕೆಲಸ ದಿವಾಕರ್ ಗೆ ಕೈ ಹಿಡಿದಿತ್ತೋ ಅದೇ ಕೆಲಸ ದಿವಾಕರ್ ಗೆ ಈಗ ಅನ್ನ ನೀರು ಕೊಡುತ್ತಿದೆ.

ದಿವಾಕರ್ ಮಹಾ ಸ್ವಾಭಿಮಾನಿ ಎನ್ನುವುದು ಬಿಗ್ ಬಾಸ್ ಶೋ ನೋಡಿದವರಿಗೆ ತಿಳಿದಿರುತ್ತೆ. ಹೇಳಿ ಕೇಳಿ ದಿವಾಕರ್ ಗೆ ಗೊತ್ತಿರೋದು ಒಂದು ಪುಟ್ಟ ಪ್ರಪಂಚ. ಬಿಗ್ ಬಾಸ್ ಮನೆಯ ಒಂದಿಷ್ಟು ಗಣ್ಯರು ಬಿಟ್ಟರೆ ಹೊರಗಿನ ಜಗತ್ತು ದಿವಾಕರ್ ಗೆ ತಿಳಿಯದು. ಮನೆಯಿಂದ ಹೊರ ಬರುವಾಗ ಅನೇಕರು ಸಲಹೆ ಸೂಚನೆ ಏನೋ ಕೊಟ್ಟರು. ಆದರೆ ಕೆಲಸ ಕೊಡಲಿಲ್ಲ. ಇವತ್ತಲ್ಲಾ ನಾಳೆ ಅದೃಷ್ಟ ದೇವತೆ ಮನೆ ಮುಂದೆ ಬರಬಹುದು ಎಂದು ಕಾದು ಕುಳಿತಿದ್ದ ದಿವಾಕರ್ ಗೆನಿರಾಶೆ ಆಗಿದೆ. ಆದರೂ ಆತ್ಮವಿಶ್ವಾಸ ಕೈಬಿಟ್ಟಿಲ್ಲ.

ದಿವಾಕರ್ ಗೆ ಇಷ್ಟೊಂದು ಆತ್ಮವಿಶ್ವಾಸ ಇರೋದಕ್ಕೆ ಕಾರಣ ಒಬ್ಬ ವ್ಯಕ್ತಿ. ಬಿಗ್ ಬಾಸ್ ಮನೆಯಲ್ಲಿದ್ದಾಗಲೂ ದಿವಾಕರ್ ಗೆ ಹುರಿದುಂಬಿಸುತ್ತಿದ್ದ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ನೈತಿಕವಾಗಿ, ಆರ್ಥಿಕವಾಗಿ ಬೆಂಬಲ ಕೊಡುತ್ತಿದ್ದಾರೆ. ಮುಂದೆ ತಮ್ಮ ಸಿನಿಮಾದಲ್ಲಿ ಪಾತ್ರ ಕೊಡೋದಾಗಿಯೂ ಭರವಸೆ ಕೊಟ್ಟಿದ್ದಾರಂತೆ. ಆದರೆ ಅಲ್ಲಿಯವರೆಗಾದರೂ ಜೀವನ ನಡೀಬೇಕಲ್ಲ. ನಾಡಿನ ಪಾಲಿಗೆ ದಿವಾಕರ್ ಗೆ ಸೆಲೆಬ್ರಿಟಿ ಎನ್ನುವ ಲೇಬಲ್ ಬಿದ್ದಿದೆ. ಸೇಲ್ಸ್ ಬ್ಯಾಗ್ ಹಾಕಿಕೊಂಡು ಊರೂರು ಸುತ್ತೋಕೆ ಮನಸ್ಸು ಒಪುತ್ತಿಲ್ಲ. ಆದರೂ ಜನರ ಪ್ರೀತಿ ದಿವಾಕರ್ ಕೈಬಿಟ್ಟಿಲ್ಲ.

ಬಿಗ್ ಬಾಸ್ ಮನೆಯಲ್ಲಿದ್ದಾಗ ದಿವಾಕರ್ ಕೈ ಸೇರಿದ್ದ ಮೂರು ಮತ್ತೊಂದಿಷ್ಟು ಹಣ. ಯಾರನ್ನೋ ಹುಡುಕಿಕೊಂಡು ಕೆಲಸ ಕೊಡಿ ಎಂದು ಕೇಳುವ ಮನಸ್ಸು ದಿವಾಕರ್ ಗೆ ಇಲ್ಲ. ಆದರೆ ಒಂದಲ್ಲ ಒಂದು ದಿನ ಒಳ್ಳೆಯದಾಗುತ್ತೆ ಎನ್ನುವ ಭರವಸೆ ದಿವಾಕರ್ ಗೆ ಇದೆ.

Share This Article
Leave a Comment

Leave a Reply

Your email address will not be published. Required fields are marked *