ಹಣದ ಆಸೆಯೇ ಇಲ್ಲ, ರೋಗಿಗಳ ಸೇವೆ ಎಲ್ಲ – 5 ರೂ.ಗೆ ಟ್ರೀಟ್‍ಮೆಂಟ್ ಕೊಡ್ತಾರೆ ಮಂಡ್ಯದ ಡಾಕ್ಟರ್

Public TV
1 Min Read

ಮಂಡ್ಯ: ರಾಜ್ಯಾದ್ಯಂತ ವೈದ್ಯರು ಮುಷ್ಕರ ಮಾಡುತ್ತಿದ್ದರೆ, ಮಂಡ್ಯದ ಡಾಕ್ಟರ್ ಶಂಕರೇಗೌಡ ಮಾತ್ರ ತಮ್ಮ ಪಾಡಿಗೆ ತಾವು ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಚರ್ಮ ಮತ್ತು ಲೈಂಗಿಕ ರೋಗ ತಜ್ಞರಾಗಿ ಹತ್ತಾರು ವರ್ಷಗಳಿಂದ ನಿರಂತರವಾಗಿ ಬಡ ಜನರಿಗೆ ಅನುಕೂಲವಾಗುವಂತೆ ಸೇವೆ ಸಲ್ಲಿಸುತ್ತಿರುವ ಶಂಕರೇಗೌಡರು 5 ರೂಪಾಯಿ ಡಾಕ್ಟರ್ ಎಂದೇ ಚಿರಪರಿಚಿತರು. ಇವರು ಸ್ವಗ್ರಾಮ ಶಿವಳ್ಳಿಯಲ್ಲಿ ಉಚಿತವಾಗಿ ರೋಗಿಗಳನ್ನು ಪರೀಕ್ಷೆ ಮಾಡ್ತಾರೆ. ಮಂಡ್ಯದ ತಮ್ಮ ಕ್ಲೀನಿಕ್‍ನಲ್ಲಿ ಮಾತ್ರ ಪ್ರತಿಯೊಬ್ಬರಿಗೆ 5 ರೂಪಾಯಿ ಪಡೆಯುತ್ತಾರೆ.

ಮಂಡ್ಯದ ತಮ್ಮ ಕ್ಲಿನಿಕ್ ನಲ್ಲಿ ಮಾತನಾಡಿದ ಅವರು, ಆರೋಗ್ಯ ಸಚಿವ ರಮೇಶ್ ಕುಮಾರ್ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಯನ್ನು ತರಲು ಮುಂದಾಗಿರೋದು ಒಳ್ಳೆಯದೇ ಆಗಿದೆ. ರಮೇಶ್ ಕುಮಾರ್ ಅವರು ಬಡ ಜನರ ಮೇಲೆ ಕಾಳಜಿ ತೋರಿಸುತ್ತಿರುವುದು ನನಗೆ ಸಂತೋಷವುಂಟು ಮಾಡಿದೆ ಅಂತ ಖಾಸಗಿ ವೈದ್ಯರ ಮುಷ್ಕರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಮುಷ್ಕರ ಒಂದು ಲಾಬಿ. ಮುಷ್ಕರದಲ್ಲಿ ಪಾಲ್ಗೊಳ್ಳಲು ನನಗೆ ಇಷ್ಟವಿಲ್ಲ. ಅಲ್ಲದೆ ಸರ್ಕಾರ ಈ ರೀತಿ ಕಾಯ್ದೆಯನ್ನ ಈ ಹಿಂದೆಯೇ ಮಾಡಬೇಕಿತ್ತು. ಆದ್ರೆ ಈಗ ತಿದ್ದುಪಡಿ ಮಾಡಲು ಹೊರಟಿರೋದು ಪ್ರತಿಭಟನೆಗೆ ಕಾರಣವಾಗಿದೆ. ನೂರಕ್ಕೆ ಎಪ್ಪತ್ತು ಭಾಗ ಜನರು ಖಾಸಗಿ ಆಸ್ಪತ್ರೆಗೆ ಹೋಗ್ತಾರೆ. ಇದಕ್ಕೆ ಸರ್ಕಾರಿ ಆಸ್ಪತ್ರೆಗಳು ಸುಸಜ್ಜಿತವಾಗಿ ಇಲ್ಲದಿರುವುದೇ ಕಾರಣ ಅಂದ್ರು.

ಖಾಸಗಿ ವೈದ್ಯರು ಮುಷ್ಕರ ಶುರುಮಾಡಿದಾಗಿನಿಂದ್ಲೂ, 5 ರೂ ಶಂಕರೇಗೌಡ್ರು ಮಾತ್ರ ಒಂದು ದಿನವು ರಜೆ ಮಾಡದೇ ನಿರಂತರವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹಿಗಾಗಿ ಇವರ ಸೇವೆಗೆ ಮಂಡ್ಯ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *