ಗ್ರೇಟ್ ಎಸ್ಕೇಪ್: ಜಸ್ಟ್ 2 ಅಡಿ ಮುಂದಕ್ಕೆ ಹೋಗಿದ್ರೆ 100 ಅಡಿ ಬಾವಿಗೆ ಬೀಳ್ತಿತ್ತು ಬಸ್

Public TV
1 Min Read

ಹೈದರಾಬಾದ್: ಆಂಧ್ರ ಪ್ರದೇಶ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 30 ಪ್ರಯಾಣಿಕರು ಸಾವಿನ ಬಾಗಿಲನ್ನು ತಟ್ಟಿ ಬಂದಿದ್ದಾರೆ. ಹೌದು, ರಸ್ತೆ ಪಕ್ಕದ ಸುಮಾರು 100 ಅಡಿ ಆಳದ ತೆರೆದ ಬಾವಿಯ ಅಂಚಿನಲ್ಲಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಬಂದು ನಿಂತಿದೆ.

ಮಂಗಳವಾರ ಅನಂತಪುರ ಜಿಲ್ಲೆಯ ಮಮಿಲ್ಲಪಲ್ಲಿ ಕುಂಟಾದ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಈ ಬಸ್ ಗೊರಂಟ್ಲಾ ದಿಂದ ಪುಟ್ಟಪರ್ತಿ ಗೆ ತನ್ನ ಪ್ರಯಾಣವನ್ನು ಬೆಳೆಸಿತ್ತು. ಬೈಕಿಗೆ ಡಿಕ್ಕಿ ಹೊಡೆಯುವದನ್ನು ತಪ್ಪಿಸಲು ಹೋಗಿ ಬಸ್ ರಸ್ತೆ ಪಕ್ಕದ ಬಾವಿಯ ಅಂಚಿಗೆ ಬಂದು ನಿಂತಿದೆ. ಬಸ್ ಮುಂದೆ 2 ಅಡಿ ಚಲಿಸಿದ್ರೂ 100 ಅಡಿ ಆಳದ ಬಾವಿಗೆ ಬೀಳುತ್ತಿತ್ತು. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ ಎಲ್ಲ 30 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆಯೇ ಹೊರತು ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.

ಮುಖ್ಯ ರಸ್ತೆಯಿಂದ ಪಾದಚಾರಿ ಮಾರ್ಗದತ್ತ ತನ್ನ ಪಥ ಬದಲಿಸಿದ ಕೂಡಲೇ ಪಾದಚಾರಿಯೊಬ್ಬರಿಗೆ ಬಸ್ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಬಳಿಕ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದ ಬಳಿಕ ಪ್ರತಿಕ್ರಿಯಿಸಿದ ಬಸ್ ಚಾಲಕ, ಬಾವಿ ಅಂಚಿನಲ್ಲಿ ಬಂದು ನಿಂತಾಗ ಒಂದು ಕ್ಷಣ ಗಾಳಿಯಲ್ಲಿ ತೇಲಾಡಿದಂತಾಯಿತು ಎಂದು ತಂಪು ಪಾನೀಯ ಒಂದರ ಜಾಹೀರಾತಿನ ಡೈಲಾಗ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *